ADVERTISEMENT

ಚುನಾವಣಾ ಖರ್ಚಿಗೆ ಮಾದೇಗೌಡರು ಹಣ ಕೇಳಿದ್ದು ತಪ್ಪಲ್ಲ: ಕುಮಾರಸ್ವಾಮಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 13:13 IST
Last Updated 7 ಏಪ್ರಿಲ್ 2019, 13:13 IST
ಕುಮಾರಸ್ವಾಮಿ, ಮುಖ್ಯಮಂತ್ರಿ
ಕುಮಾರಸ್ವಾಮಿ, ಮುಖ್ಯಮಂತ್ರಿ   

ಉಡುಪಿ: ‘ಚುನಾವಣೆ ನಡೆಸಬೇಕಾದರೆ ಹಣ ಖರ್ಚು ಮಾಡಬೇಕಾಗುತ್ತದೆ. ಅದರಂತೆ, ಮಂಡ್ಯದಲ್ಲಿ ಮಾದೇಗೌಡರು ಚುನಾವಣೆಯ ಖರ್ಚಿಗೆ ಹಣ ಕಳಿಸುವಂತೆ ಸಚಿವ ಪುಟ್ಟರಾಜು ಬಳಿ ಕೇಳಿದ್ದಾರೆ. ಇದರಲ್ಲಿ ತಪ್ಪೇನಿದೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದರು.

ಉಡುಪಿಯ ಕಾಂಗ್ರೆಸ್‌ ಭವನದಲ್ಲಿ ಮಾತನಾಡಿದ ಅವರು, ವಿಜಯವಾಣಿ ಹಾಗೂ ದಿಗ್ವಿಜಯ’ ವಾಹಿನಿಯ ಪತ್ರಕರ್ತರು ಕಾಂಗ್ರೆಸ್‌ ಕಾರ್ಯಕರ್ತರು ಎಂದು ಹೇಳಿಕೊಂಡು ಮಾದೇಗೌಡರಂತಹ ಗಾಂಧಿವಾದಿಯ ಮನೆಗೆ ಹೋಗಿ ಚುನಾವಣಾ ಖರ್ಚಿಗೆ ಹಣ ಕೊಡಿಸುವಂತೆ ಕೇಳಿದ್ದಾರೆ.

ಬಳಿಕ ಅವರೇ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರಿಗೆ ಕರೆ ಮಾಡಿ ಮಾತನಾಡಲು ಕೊಟ್ಟಿದ್ದಾರೆ. ಮಾದೇಗೌಡರು ಚುನಾವಣಾ ಖರ್ಚಿಗೆ ಹಣ ನೀಡುವಂತೆ ಸಚಿವರಿಗೆ ಕೇಳಿದ್ದಾರೆ. ಇದನ್ನೇ ದೊಡ್ಡ ಅಪರಾಧ ಎಂಬಂತೆ ಬ್ರೇಕಿಂಗ್ ನ್ಯೂಸ್‌ ಮಾಡಿವೆ ಎಂದು ಕಿಡಿಕಾರಿದರು.

ಬಿಜೆಪಿ ನಾಯಕರು ಹಾಗೂ ಮಾಧ್ಯಮಗಳು ಸೇರಿಕೊಂಡು ಕಳೆದ ಒಂಬತ್ತೂವರೆ ತಿಂಗಳಿನಿಂದ ಒಂದು ದಿನವೂ ನೆಮ್ಮದಿಯಿಂದ ಅಧಿಕಾರ ನಡೆಸಲು ಬಿಟ್ಟಿಲ್ಲ.ಮೈತ್ರಿ ಸರ್ಕಾರ ರಚನೆಯಾದ ದಿನದಿಂದಲೂ ಬಿದ್ದು ಹೋಗುತ್ತದೆ ಎಂದು ದೃಶ್ಯಮಾಧ್ಯಮದವರು ಸುದ್ದಿ ಪ್ರಸಾರ ಮಾಡುತ್ತಲೇ ಬಂದಿದ್ದಾರೆ. ಅಭದ್ರ ಸರ್ಕಾರ ಎಂಬ ಭಾವನೆಯನ್ನು ಮೂಡಿಸಿದರೆ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳುವುದಾದರೂ ಹೇಗೆ ಎಂದು ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.