ಚಿಕ್ಕಬಳ್ಳಾಪುರ: ರಾಜ್ಯದಿಂದ ಲೋಕಸಭೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರ ಪ್ರತಿನಿಧಿಸುವ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಹೆಸರು ಇಲ್ಲದಿರುವುದು ಹಲವು ಅನುಮಾನಗಳಿಗೆ ಮತ್ತು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ನೆರೆಯ ಕೋಲಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದ್ದು, ವೀರಪ್ಪ ಮೊಯಿಲಿ ಹೆಸರು ಪ್ರಕಟಿಸಿದೇ ಇರುವುದು ರಾಜಕೀಯ ವಲಯದಲ್ಲಿ ತೀವ್ರ ಅಚ್ಚರಿ ಮೂಡಿಸಿದೆ.
ಇದರ ಮಧ್ಯೆ ಮೊಯಿಲಿ ಬದಲಿಗೆ ಕೇಂದ್ರ ಸಚಿವ ಹಾಗೂ ನಟ ಚಿರಂಜೀವಿ ಅವರನ್ನು ಕಣಕ್ಕೆ ಇಳಿಸುವುದರ ಬಗ್ಗೆ ಪಕ್ಷದ ಉನ್ನತ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ನಿಖರ ಮಾಹಿತಿ ಒಂದೆರಡು ದಿನಗಳಲ್ಲಿ ಲಭ್ಯವಾಗಲಿದೆ ಎಂದು ಮೂಲಗಳು ಹೇಳುತ್ತಿವೆ.
ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಮುನ್ನವೇ ತರಾತುರಿಯಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರೂ ಕ್ಷೇತ್ರದ ಜನರು ಅಪಸ್ವರ ವ್ಯಕ್ತಪಡಿಸುತ್ತಿರುವ ಕಾರಣ ಮೊಯಿಲಿಯವರೇ ಸ್ಪರ್ಧಿಸಲು ಹಿಂಜರಿಯುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಬದಲಾವಣೆ ಏಕೆ?: ವೀರಪ್ಪ ಮೊಯಿಲಿ ಅವರು ಕೇಂದ್ರ ಸಚಿವರಾಗಿದ್ದರೂ ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಮಾಡಿಲ್ಲ ಎಂದು ಜನರಿಂದ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಎಚ್ಚರಿಕೆಯಿಂದ ಹೆಜ್ಜೆಯಿಡಲು ತೀರ್ಮಾನಿಸಿದೆ. ಈ ಕಾರಣದಿಂದಲೇ ಮೊದಲ ಪಟ್ಟಿಯಲ್ಲಿ ಮೊಯಿಲಿ ಹೆಸರನ್ನು ಸೇರ್ಪಡೆ ಮಾಡಿಲ್ಲ ಎನ್ನಲಾಗುತ್ತಿದೆ.
ಜ.31ರಂದು ಗೌರಿಬಿದನೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊಯಿಲಿ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿದಾಗ ಪಕ್ಷದ ಬಹುತೇಕ ಕಾರ್ಯಕರ್ತರು ಮತ್ತು ಸಾರ್ವಜನಿಕರು ಕೈಯೆತ್ತಿ ‘ಮೊಯಿಲಿ ಏನೂ ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ‘ಎತ್ತಿನಹೊಳೆಯಿಂದ ನೀರು ಬೇಕಾದರೆ ಬರಲಿ, ಆದರೆ ಮೊಯಿಲಿ ಬೇಡ’ ಎಂದು ನೇರವಾಗಿಯೇ ಹೇಳಿದ್ದರು.
ಅಷ್ಟೇ ಅಲ್ಲ, ಎತ್ತಿನಹೊಳೆ ಯೋಜನೆ ಶಂಕುಸ್ಥಾಪನೆ ವಿರೋಧಿಸಿ ಮತ್ತು ಮೊಯಿಲಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಜನವರಿ 31ರಂದು ಜಿಲ್ಲೆಯಾದ್ಯಂತ ಬಂದ್ ಕೂಡ ಆಚರಿಸಲಾಗಿತ್ತು. ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿದ್ದರೂ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ಮೊಯಿಲಿ ವಿಫಲರಾಗಿದ್ದಾರೆ ಎಂದು ಜನರು ಆರೋಪಿಸಿದ್ದರು.
ಚಿರಂಜೀವಿಯೇ ಏಕೆ?: ಗಡಿ ಜಿಲ್ಲೆಯಾಗಿರುವ ಕಾರಣ ಆಂಧ್ರಪ್ರದೇಶದ ದಟ್ಟ ಪ್ರಭಾವವಿದ್ದು ಕೇಂದ್ರ ಸಚಿವ ಚಿರಂಜೀವಿ ಅವರನ್ನು ಚಿಕ್ಕಬಳ್ಳಾಪುರದಿಂದ ಕಣಕ್ಕೆ ಇಳಿಸಿದಲ್ಲಿ, ಪಕ್ಷಕ್ಕೆ ಲಾಭವಾಗಬಹುದು. ಚಿರಂಜೀವಿ ಅಭಿಮಾನಿಗಳು ಮತ್ತು ಬಲಿಜಿಗ ಸಮುದಾಯದವರು ಅಪಾರ ಸಂಖ್ಯೆಯಲ್ಲಿದ್ದು, ಈ ಲೆಕ್ಕಾಚಾರದ ಮೇಲೆ ನಿರಾತಂಕವಾಗಿ ಚುನಾವಣೆ ಎದುರಿಸಬಹುದು ಎಂದು ಪಕ್ಷದ ನಾಯಕರು ಆಲೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಚಿರಂಜೀವಿ ಕ್ಷೇತ್ರದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಭೇಟಿ ನೀಡಿದ್ದಾರೆ. ಆಂಧ್ರ ವಿಭಜನೆ ನಂತರ ಅಲ್ಲಿ ಚಿರಂಜೀವಿ ಅವರಿಗೆ ಚುನಾವಣೆ ಎದುರಿಸುವುದು ಸವಾಲಾಗಿದೆ. ಆ ಮುಜುಗರ ತಪ್ಪಿಸಿಕೊಳ್ಳಲು ಪಕ್ಷವು ಅವರನ್ನು ಚಿಕ್ಕಬಳ್ಳಾಪುರದಿಂದ ಕಣಕ್ಕೆ ಇಳಿಸಲು ಆಲೋಚನೆ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
ವಿಳಂಬ ಆಗಿದೆ: ಕಾಂಗ್ರೆಸ್ ಪಟ್ಟಿಯಲ್ಲಿ ಇನ್ನೂ 14 ಮಂದಿ ಅಭ್ಯರ್ಥಿಗಳ ಹೆಸರು ಘೋಷಣೆಯಾಗಬೇಕಿದ್ದು ಮೊಯಿಲಿಯವರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಕೆಲ ಕಾರಣಗಳಿಂದ ವಿಳಂಬವಾಗಿರುವುದು ಹೊರತುಪಡಿಸಿದರೆ ಬೇರೆ ಬೆಳವಣಿಗೆಗಳ ಬಗ್ಗೆ ಗೊತ್ತಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಆಂಜನಪ್ಪ ತಿಳಿಸಿದರು.
‘ಎರಡನೇ ಪಟ್ಟಿಯಲ್ಲಿ ಮೊಯಿಲಿ’
ಬೆಂಗಳೂರು: ವೀರಪ್ಪ ಮೊಯಿಲಿ ಅವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲೇ ಟಿಕೆಟ್ ದೊರೆಯಲಿದ್ದು, ಎರಡನೇ ಪಟ್ಟಿಯಲ್ಲಿ ಈ ಕುರಿತ ಪ್ರಕಟಣೆ ಹೊರಬೀಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾನುವಾರ ನಡೆದ ‘ಭಾರತ ನಿರ್ಮಾಣ ಪಾದಯಾತ್ರೆ’ಯಲ್ಲಿ ಪಾಲ್ಗೊಳ್ಳುವ ಮುನ್ನ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಮೊಯಿಲಿ ಅವರಿಗೆ ಟಿಕೆಟ್ ನಿರಾಕರಿಸಿಲ್ಲ. ಆ ರೀತಿಯ ಭಾವನೆ ಬೇಡ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.