ADVERTISEMENT

ಚಿತ್ತಾಪುರ | ಮತಗಟ್ಟೆ ಸಮೀಪ ಹಣ, ಮತಚೀಟಿ ಸಹಿತ ಐವರು ವಶ

​ಪ್ರಜಾವಾಣಿ ವಾರ್ತೆ
Published 10 ಮೇ 2023, 10:23 IST
Last Updated 10 ಮೇ 2023, 10:23 IST
   

ಚಿತ್ತಾಪುರ (ಕಲಬುರಗಿ): ವಿಧಾನಸಭೆ ಚುನಾವಣೆ ಮತದಾನಕ್ಕೆಂದು ಸ್ಥಾಪಿಸಿರುವ ಮತಗಟ್ಟೆ ಸಂಖ್ಯೆ 83 ಮತ್ತು 84ರ ಸಮೀಪ ಹಣ ಮತ್ತು ಮತಚೀಟಿ ಸಹಿತ ಐವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬುಧವಾರ ಜರುಗಿದೆ.

ಮಧ್ಯಾಹ್ನ 1ರ ವೇಳೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಮತದಾನ ಕೇಂದ್ರದತ್ತ ತೆರಳುವಾಗ ಬಾಹರಪೇಠದ ಬಸವಣ್ಣ ದೇವಸ್ಥಾನ ಸಮೀಪ‌ ಹಲವರು ನಿಂತಿದ್ದರು. ಎಸ್.ಪಿ ಅವರ ಕಾರು ನೋಡುತ್ತಿದ್ದಂತೆ ಚದುರಿದರು. ಹಣ ಹಂಚುತ್ತಿರಬೇಕೆಂದು ಭಾವಿಸಿದ ಪೊಲೀಸರು ಓಡುತ್ತಿದ್ದವರನ್ನು ಬೆನ್ನಟ್ಟಿದ್ದರು. ಕೆಲವರು ಬಸವಣ್ಣ ದೇವಸ್ಥಾನದ ಕಲ್ಯಾಣ ಮಂಟಪ ಸೇರಿಕೊಂಡರು ಎಂದು ತಿಳಿದುಬಂದಿದೆ.

ಪೊಲೀಸರು ಅವರನ್ನು ಬೆನ್ನಟ್ಟಿ ಹಿಡಿದು ತಪಾಸಣೆ ಮಾಡಿದಾಗ ಹಣ ಮತ್ತು ಮತಚೀಟಿ ದೊರೆತಿವೆ. ಕೆಲವರು ಬಯಲಿನಲ್ಲಿ ಗಿಡದ ನೆರಳಿನಲ್ಲಿ ನಿಂತಾಗ ವಶಕ್ಕೆ ಪಡೆದು ತಪಾಸಣೆ ಮಾಡಿದಾಗ ಜೇಬಿನಲ್ಲಿ ಹಣ, ಮತಚೀಟಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಹಣ ಮತ್ತು ಮತಚೀಟಿ ಇಟ್ಟುಕೊಂಡವರನ್ನು ತರಾಟೆಗೆ ತೆಗೆದುಕೊಂಡಿರುವ ಎಸ್.ಪಿ ಇಶಾ ಪಂತ್ ಅವರು, 'ಆಡಳಿತವು ನ್ಯಾಯಸಮ್ಮತ, ನಿರ್ಭೀತ, ಮುಕ್ತ ಮತದಾನಕ್ಕೆ ಪರಿಶ್ರಮ ಪಡುತ್ತಿದೆ. ಮತದಾರರ ಓಲೈಕೆಗೆ ಹಣ ಹಂಚಲು ನಿಮಗೆ ನಾಚಿಕೆಯಾಗುವುದಿಲ್ಲವೇ?' ಎಂದು ಗದರಿಸಿದರು.

ಐವರ ಹತ್ತಿರ ಪತ್ತೆಯಾಗಿರುವ ಹಣ, ಮತಚೀಟಿ ವಶಕ್ಕೆ ಪಡೆದುಕೊಂಡ ಇಶಾ ಪಂತ್ ಅವರು ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐ ನಂದಕುಮಾರ ಅವರನ್ನು ಘಟನಾ ಸ್ಥಳಕ್ಕೆ ಕರೆಯಿಸಿಕೊಂಡು, ಎಲ್ಲರನ್ನೂ ವಿಡಿಯೊ ರೆಕಾರ್ಡಿಂಗ್ ಮೂಲಕ ತಪಾಸಣೆ ಮಾಡಿ ಎಫ್ಐಆರ್ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿ ಪಂಡಿತ್ ಸಿಂಧೆ ಅವರನ್ನು ಕರೆಯಿಸಿಕೊಂಡು, ಪತ್ತೆಯಾದ ಹಣ, ಮತಚೀಟಿ ಅವರ ವಶಕ್ಕೆ ಒಪ್ಪಿಸಿದ ಪಂತ್ ಅವರು, ಪರಿಶೀಲನೆ ನಡೆಸಿ, ತಪಾಸಣೆ ಮಾಡಿ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಿ ಎಂದರು.

ಮುಲಾಜಿಲ್ಲದೆ ಕ್ರಮ: 'ಚುನಾವಣೆಯಲ್ಲಿ ಮತದಾರರಿಗೆ ಆಮೀಷ‌ ಒಡ್ಡುವುದಾಗಲಿ, ಮತ ಗಳಿಕೆಗೆ ಮತದಾರರಿಗೆ ಹಣ ಹಂಚುವುದು ಕಾನೂನು ಪ್ರಕಾರ ಅಪರಾಧ. ವಶಕ್ಕೆ ಪಡೆದ ಐದು ಜನರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಸ್.ಪಿ ಇಶಾ ಪಂತ್ ಅವರು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ಜಿಲ್ಲಾ ಕೇಂದ್ರದಿಂದ ನೀವೇ ಆಗಮಿಸಿ ಇಂತಹ ಪ್ರಕರಣ ಪತ್ತೆ ಮಾಡಿದ್ದೀರಿ. ಸ್ಥಳೀಯ ಪೊಲೀಸರ ವೈಫಲ್ಯವಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಇಶಾ ಪಂತ್ ಅವರು, 'ಸ್ಥಳೀಯ ಪೊಲೀಸ್ ಅಧಿಕಾರಿಗಳು ಚುನಾವಣೆಯ ಕರ್ತವ್ಯದ ನಿಮಿತ್ತ ಎಲ್ಲೆಡೆ ಸಂಚರಿಸಿ ನಿಗಾ ವಹಿಸುವ ಅನಿವಾರ್ಯತೆಯಿದೆ. ಹೀಗಾಗಿ ಜನರು ಮತದಾನ ನಡೆಯುವ ಸಮಯ ಮತ್ತು ಮತಗಟ್ಟೆ ಹತ್ತಿರ ಹಣದ ಸಹಿತ ಮತಚೀಟಿ ಇಟ್ಟುಕೊಂಡು ಮತದಾರರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ತಪಾಸಣೆ ನಂತರ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ನೀಡುವ ದೂರು ಆಧರಿಸಿ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣಾಧಿಕಾರಿಯು ಎಫ್ಐಆರ್ ದಾಖಲಿಸುತ್ತಾರೆ' ಎಂದು ಅವರು ಹೇಳಿದರು.

ಬಿಜೆಪಿ ಕಾರ್ಯಕರ್ತರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ವಶಕ್ಕೆ ಪಡೆದಿರುವ ಐದು ಜನರು ಬಿಜೆಪಿ ಕಾರ್ಯಕರ್ತರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.