ಹಾಸನ: ಜೆಡಿಎಸ್ ಅಭ್ಯರ್ಥಿಯನ್ನು ಬದಲಿಸುವಂತೆ ಬಿಜೆಪಿ ಸ್ಥಳೀಯ ನಾಯಕರು ಪಟ್ಟು ಹಿಡಿದಿರುವ ಮಧ್ಯೆಯೇ, ಸಂಸದ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮತ್ತಷ್ಟು ಚುರುಕಾಗಿದೆ. ಅವರ ತಾಯಿ ಭವಾನಿ ಪುತ್ರನ ಪರ ಮತಯಾಚನೆ ಆರಂಭಿಸಿದ್ದಾರೆ.
ಬಿಜೆಪಿಯ ಮೈತ್ರಿ ಅಭ್ಯರ್ಥಿಯ ಘೋಷಣೆ ಇನ್ನೂ ಆಗಿಲ್ಲ. ಜೊತೆಗೆ, ಪ್ರಜ್ವಲ್ ಸ್ಪರ್ಧೆಗೆ ಸ್ಥಳೀಯ ಬಿಜೆಪಿ ನಾಯಕರ ವಿರೋಧವೂ ಇದೆ. ಆದರೂ ಪ್ರಜ್ವಲ್ ಪರ ಬಿರುಸಿನ ಪ್ರಚಾರ ಆರಂಭಿಸಿರುವುದು ಕುತೂಹಲ ಮೂಡಿಸಿದೆ.
ಸೋಮವಾರ ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಶಾಸಕ ಎ.ಮಂಜು ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಅದರ ಬೆನ್ನಲ್ಲೇ ಎಚ್.ಡಿ. ರೇವಣ್ಣ ಹಾಗೂ ಶಾಸಕ ಸಿ.ಎನ್. ಬಾಲಕೃಷ್ಣ ಅವರೂ ಎ.ಮಂಜು ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
‘ಮೈತ್ರಿ ಕುರಿತು ಗೊಂದಲಗಳಿಲ್ಲ. ಸೀಟು ಹಂಚಿಕೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೊತೆಗೆ ದೇವೇಗೌಡರು ಚರ್ಚಿಸಲಿದ್ದಾರೆ’ ಎಂದು ಪ್ರಜ್ವಲ್ ಪ್ರತಿಕ್ರಿಯಿಸಿದ್ದಾರೆ.
‘ಹಾಸನದಲ್ಲಿ ಬಿಜೆಪಿ ನಾಯಕರ ವಿರೋಧ ಗಮನಕ್ಕೆ ಬಂದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪ್ರಚಾರಕ್ಕೆ ಹೋಗುತ್ತಿದ್ದೇವೆ. ಬಿಜೆಪಿಯ ಹಿರಿಯ ಮುಖಂಡರು, ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಕೂಡ ಯಡಿಯೂರಪ್ಪ ಅವರಲ್ಲಿ ಸಮಯ ಕೇಳಿದ್ದು, ನಾಳೆ ಅಥವಾ ನಾಡಿದ್ದು ಭೇಟಿ ಮಾಡುವೆ’ ಎಂದು ತಿಳಿಸಿದ್ದಾರೆ.
‘ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ಅಭ್ಯರ್ಥಿಯಾಗಿರುವುದರಿಂದ ವಕೀಲರ ಸಂಘಕ್ಕೆ ಭೇಟಿ ಕೊಟ್ಟು ಮತ ಯಾಚಿಸಿದ್ದೇನೆ. ಪ್ರಚಾರದ ಸಂದರ್ಭದಲ್ಲಿ ಎಲ್ಲೆಡೆ ಅಭಿಪ್ರಾಯ ಚೆನ್ನಾಗಿದೆ. ಐದು ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನವನ್ನು ತಂದು ಜಿಲ್ಲೆಯ ಅಭಿವೃದ್ಧಿಗೆ ಪ್ರಜ್ವಲ್ ಶ್ರಮಿಸಿದ್ದಾರೆ’ ಎಂದು ಭವಾನಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.