ADVERTISEMENT

ನಾನು ಕಾಂಗ್ರೆಸ್‌ ಸೇರುವುದಿಲ್ಲ, BJP ಶುದ್ದೀಕರಣ ನನ್ನ ಮುಂದಿನ ಉದ್ದೇಶ: ಡಿವಿಎಸ್

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 9:00 IST
Last Updated 21 ಮಾರ್ಚ್ 2024, 9:00 IST
ಡಿ.ವಿ. ಸದಾನಂದ ಗೌಡ 
ಡಿ.ವಿ. ಸದಾನಂದ ಗೌಡ    

ಬೆಂಗಳೂರು: ನಾನು ಕಾಂಗ್ರೆಸ್‌ಗೆ ಸೇರುವುದಿಲ್ಲ. ಆದರೆ, ಬಿಜೆಪಿ ಶುದ್ಧೀಕರಣ ಮಾಡುವುದೇ ನನ್ನ ಮುಂದಿನ ಉದ್ದೇಶ ಎಂದು ಸಂಸದ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನನಗೆ ಟಿಕೆಟ್‌ ಸಿಗದೇ ಇರುವುದಕ್ಕೆ ನೋವಾಗಿದೆ. ನನಗೆ ಅನ್ಯಾಯ ಮಾಡಿದವರು ಮತ್ತು ನೋವುಂಟು ಮಾಡಿದವರು ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡಲಿದ್ದಾರೆ ಎಂದರು.

ನಾನು ಚುನಾವಣಾ ಕಣದಿಂದ ದೂರ ಸರಿಯುವ ಉದ್ದೇಶ ಹೊಂದಿದ್ದೆ. ಆದರೆ ಒಬ್ಬರು ಮಾಜಿ ಮುಖ್ಯಮಂತ್ರಿ, ಇಬ್ಬರು ಮಾಜಿ ಡಿಸಿಎಂಗಳು ಮತ್ತು ಕೆಲವು ಮಾಜಿ ಮಂತ್ರಿಗಳು ಬಂದು ಚುನಾವಣೆಯಲ್ಲಿ ನಿಲ್ಲಲೇ ಬೇಕು ಎಂದು ಹೇಳಿದರು. ಆ ಬಳಿಕ ಟಿಕೆಟ್‌ ಬೇರೆಯವರಿಗೆ ಘೋಷಿಸಲಾಯಿತು ಎಂದರು.

ADVERTISEMENT

ಮೋದಿಯವರು ದೇಶವೇ ನನ್ನ ಪರಿವಾರ ಎಂದಿದ್ದಾರೆ. ಆದರೆ ಇಲ್ಲಿ ಒಂದು ಕುಟುಂಬದ ಹಿಡಿತಕ್ಕೆ ಪಕ್ಷ ಸಿಲುಕಿದೆ. ಒಂದು ಕುಟುಂಬ, ಒಂದು ಜಾತಿಯ ಪಕ್ಷ ಆಗಬಾರದು. ಇದು ಪಕ್ಷದ ಸಿದ್ಧಾಂತ ಮತ್ತು ಮೋದಿಯವರ ನಿಲುವಿಗೆ ವಿರುದ್ಧವಾದುದು ಎಂದು ಸದಾನಂದಗೌಡ ಹೇಳಿದರು.

ಕಾಂಗ್ರೆಸ್‌ನಿಂದ ಆಹ್ವಾನ ಬಂದಿದ್ದು ನಿಜ. ಆದರೆ, ನಾನು ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.