ADVERTISEMENT

ನಮ್ಮ ಗ್ಯಾರಂಟಿ ಬೇಕಾ, ಮೋದಿ ಸುಳ್ಳಿನ ಗ್ಯಾರಂಟಿ ಬೇಕಾ?– ಈಶ್ವರ ಬಿ. ಖಂಡ್ರೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 13:06 IST
Last Updated 17 ಏಪ್ರಿಲ್ 2024, 13:06 IST
<div class="paragraphs"><p>ಬೀದರ್‌ನ&nbsp;ಗಣೇಶ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು</p></div>

ಬೀದರ್‌ನ ಗಣೇಶ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು

   

ಪ್ರಜಾವಾಣಿ ಚಿತ್ರ

ಬೀದರ್: ‘ನಾವು ನುಡಿದಂತೆ ನಡೆದಿದ್ದೇವೆ. ವಿಧಾನಸಭೆ ಚುನಾವಣೆಗೂ ಮುನ್ನ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ಐದೂ ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಅದರ ಪ್ರಯೋಜನ ಜನರಿಗೆ ಸಿಗುತ್ತಿದೆ. ಈಗ ನೀವೇ ತೀರ್ಮಾನಿಸಿ, ನಮ್ಮ ಗ್ಯಾರಂಟಿ ಬೇಕಾ, ಮೋದಿ ಸುಳ್ಳಿನ ಗ್ಯಾರಂಟಿ ಬೇಕಾ?’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಜನರನ್ನು ಕೇಳಿದರು. ಆಗ ಜನ ಕಾಂಗ್ರೆಸ್‌ ಗ್ಯಾರಂಟಿ ಎಂದು ಕೂಗಿದರು.

ADVERTISEMENT

ಹಿಂದೆ ಡಬಲ್‌ ಎಂಜಿನ್‌ ಸರ್ಕಾರ ಏನು ಮಾಡಿದೆ ಎನ್ನುವುದು ನಿಮ್ಮೆಗೆಲ್ಲರಿಗೂ ಗೊತ್ತಿದೆ. ಅವರು ಏನೂ ಮಾಡದ ಕಾರಣ ನಮಗೆ ಅವಕಾಶ ಕೊಟ್ಟಿದ್ದೀರಿ. ಹತ್ತು ತಿಂಗಳಲ್ಲಿ ನಾವೇನೂ ಕೆಲಸ ಮಾಡಿದ್ದೇವೆ ಎನ್ನುವುದು ನಿಮಗೆ ಗೊತ್ತಿದೆ. ಐದು ವರ್ಷ ಗ್ಯಾರಂಟಿಗಳು ಮುಂದುವರೆಯಲಿವೆ. ವಿರೋಧಿಗಳ ಸುಳ್ಳು ಮಾತುಗಳಿಗೆ ಕಿವಿಗೊಡಬೇಕಿಲ್ಲ ಎಂದರು.

ಬೈ ಬೈ ಭಗವಂತ ಖೂಬಾ ಸಂಕಲ್ಪ ಮಾಡಿ

‘ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಬೈ ಬೈ ಭಗವಂತ ಖೂಬಾ ಎಂದು ಸಂಕಲ್ಪ ಮಾಡಬೇಕು. ಅವರು ಈ ಸಲದ ಚುನಾವಣೆಯಲ್ಲಿ ಸೋತರೆ ಮರಳಿ ಬರುವುದಿಲ್ಲ’ ಎಂದು ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ನಗರದ ಗಣೇಶ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಸ್ವಪಕ್ಷೀಯ ಶಾಸಕರೇ ಭಗವಂತ ಖೂಬಾ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಬಸವಕಲ್ಯಾಣ ಶಾಸಕ ಚಪ್ಪಲಿಯಿಂದ ಹೊಡೆದರು. ಇವರಿಗೆ ಮಾನ, ಮರ್ಯಾದೆ ಇಲ್ಲವೇ?’ ಎಂದು‘ ಪ್ರಶ್ನಿಸಿದರು.

ಕೇಂದ್ರ ಮಂತ್ರಿ ಆಗಿದ್ದರೂ ಬೀದರ್‌ನಿಂದ ವಿಮಾನಯಾನ ಸೇವೆ ರದ್ದುಗೊಂಡಿದೆ. ಇವರಿಗೆ ಏನಾದರೂ ಮಾನ, ಮರ್ಯಾದೆ ಇದೆಯಾ? ಇದು ಖೂಬಾ ಅವರ ಕೊನೆಯ ಚುನಾವಣೆ. ಅವರಿಗೆ ಮುಂದೆ ಯಾವುದೇ ಚುನಾವಣೆಯಲ್ಲಿ ಅವರ ಪಕ್ಷದ ಟಿಕೆಟ್‌ ಸಿಗಲ್ಲ. ಖೂಬಾ ಬಹಳ ಮೋಸಗಾರ. ಕಳಪೆ ಕಾಮಗಾರಿ ಮಾಡಿ ಹಣ ಲೂಟಿ ಹೊಡೆದಿದ್ದಾರೆ. ಲೂಟಿ ಬಿಟ್ಟರೆ ಅವರಿಗೆ ಬೇರೇನೂ ಕೆಲಸವಿಲ್ಲ ಎಂದು ಆರೋಪಿಸಿದರು.

ಭಗವಂತ ಖೂಬಾ ಅವರು ಏನು ಘನಂದಾರಿ ಕೆಲಸ ಮಾಡಿದ್ದಾರೆ. ಯಾರದ್ದಾದರೂ ಸುಖ–ದುಃಖ ಕೇಳಿದ್ದಾರಾ? ಕೋವಿಡ್‌ ಬಂದಾಗ ಇವರು ಜನರಿಗೆ ಆಕ್ಸಿಜನ್‌, ಔಷಧಿ ವ್ಯವಸ್ಥೆ ಮಾಡುವುದು ಬಿಟ್ಟು ಮೌನಚರಣೆ ಮಾಡಿದ್ದರು. ನನಗೆ ಕೋವಿಡ್‌ ಬಂದಾಗ ನಾನು ಆಸ್ಪತ್ರೆಗೆ ದಾಖಲಾಗಿದ್ದೆ. ನನ್ನ ಮಗ ಸಾಗರ್‌ ಖಂಡ್ರೆ ಜನರ ಮಧ್ಯೆ ಓಡಾಡಿ ಜನ ಸೇವೆ ಮಾಡಿದ್ದ. ಬಿಜೆಪಿಯ ಭಗವಂತ ಖೂಬಾ ಬೇಕಾ? ಅಥವಾ ಜನಸೇವಕ ಸಾಗರ್‌ ಖಂಡ್ರೆ ಬೇಕಾ? ಎಂಬುದನ್ನು ಜನ ತೀರ್ಮಾನಿಸಬೇಕು. ಸಾಗರ್‌ ಖಂಡ್ರೆ ನನ್ನ ಮಗ ಎಂದು ಟಿಕೆಟ್‌ ಕೊಟ್ಟಿಲ್ಲ. ಕಾನೂನು ಪದವೀಧರ, ಪಕ್ಷದಲ್ಲಿನ ಸಂಘಟನೆಯ ಕೆಲಸ ನೋಡಿ ಪಕ್ಷದ ವರಿಷ್ಠರು ಟಿಕೆಟ್‌ ಕೊಟ್ಟಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.