ಕುಣಿಗಲ್: ತಾಲ್ಲೂಕಿನವರೇ ಆದ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ರಾಜಕೀಯ ಜೀವನದಲ್ಲಿ ಸ್ಪರ್ಧೆಗಿಂತ ಟಿಕೆಟ್ನಿಂದ ವಂಚಿತರಾಗಿದ್ದೇ ಹೆಚ್ಚು.
ಈ ಹಿಂದೆ ಕುಣಿಗಲ್ ಶಾಸಕರಾಗಿ ಆಯ್ಕೆಯಾಗಿದ್ದರೂ, ನಂತರದ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಟಿಕೆಟ್ ಕೈತಪ್ಪಿದ್ದವು. ಈಗ ಬಿಜೆಪಿಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
1989ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಅಂತಿಮ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿ ಅಂದಿನ ಮಾಜಿ ಸಂಸದರಾಗಿದ್ದ ಕೆ. ಲಕ್ಕಪ್ಪ ಅಭ್ಯರ್ಥಿ ಯಾದರು. 2008ರಲ್ಲಿ ಬಿ.ಬಿ. ರಾಮಸ್ವಾಮಿಗೌಡ ಅಭ್ಯರ್ಥಿಯಾಗುವ ಮೂಲಕ ಕಾಂಗ್ರೆಸ್ ಟಿಕೆಟ್ನಿಂದ ವಂಚಿತರಾದರು.
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ 2013ರಲ್ಲಿ ಜೆಡಿಎಸ್ ಪಕ್ಷದಿಂದ ಬಿ– ಫಾರಂ ಪಡೆದು ನಾಮಪತ್ರ ಸಲ್ಲಿಸಿದ್ದರೂ, ಬೇರೆ ಅಭ್ಯರ್ಥಿಗೆ ಸಿ–ಫಾರಂ ಕೊಟ್ಟಿದ್ದರಿಂದ ಟಿಕೆಟ್ ಕಳೆದುಕೊಂಡರು. ನಂತರ ಕಾಂಗ್ರೆಸ್ ಸೇರಿ ತುಮಕೂರು ಸಂಸದರಾಗಿ ಆಯ್ಕೆ ಆಗಿದ್ದರು. ಎರಡನೇ ಬಾರಿಗೆ ಸ್ಪರ್ಧಿಸಲು ಸಿದ್ಧರಾಗಿದ್ದಾಗ, ಜೆಡಿಎಸ್ ಜತೆಗಿನ ಹೊಂದಾಣಿಕೆಯಿಂದಾಗಿ ಮತ್ತೆ ಸ್ಪರ್ಧಿಸುವ ಅವಕಾಶದಿಂದ ವಂಚಿತರಾದರು.
ವಿಧಾನಸಭೆಯ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಹುರಿಯಾಳಾಗಿ ಸ್ಪರ್ಧಿಸಲು ಪ್ರಯತ್ನ ನಡೆಸಿದ್ದರು. ಟಿಕೆಟ್ ಸಿಗುವುದು ಅನುಮಾನ ಎಂಬುದು ಗೊತ್ತಾಗುತ್ತಿದ್ದಂತೆ ಬಿಜೆಪಿ ಸೇರಿದ್ದಾರೆ. ಟಿಕೆಟ್ಗೆ ಪ್ರಯತ್ನ ನಡೆಸಿದ್ದು, ಬಿಜೆಪಿ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.