ADVERTISEMENT

ಗಾಳಿಮಾತು ಅಂಕಣ | ಸುಧಾಕರ್ ಗೂಢಚಾರಿಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2023, 1:30 IST
Last Updated 12 ಏಪ್ರಿಲ್ 2023, 1:30 IST
ಕೆ. ಸುಧಾಕರ್‌
ಕೆ. ಸುಧಾಕರ್‌   

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ವಿರೋಧ ಪಕ್ಷದವರು, ಮಾಧ್ಯಮದವರ ಚಲನವಲನಗಳ ಮೇಲೆ ಸಚಿವ ಡಾ.ಕೆ.ಸುಧಾಕರ್ ಕಡೆಯ 200ಕ್ಕೂ ಹೆಚ್ಚು ಮಂದಿ ಗೂಢಚಾರಿಕೆ ನಡೆಸಿದ್ದಾರೆ ಎನ್ನುವ ಅಂತೆ ಕಂತೆ ಜೋರಾಗಿಯೇ ಸದ್ದು ಮಾಡುತ್ತಿವೆ.

ಎದುರಾಳಿ ಅಭ್ಯರ್ಥಿ ಯಾವ ಗ್ರಾಮಗಳಲ್ಲಿ ಯಾರ ಮನೆಗೆ ಭೇಟಿ ನೀಡಿದ್ದಾರೆ? ಯಾವ ಮುಖಂಡರು ಯಾರ ಜತೆ ನಿಕಟವಾಗಿದ್ದಾರೆ? ಎದುರಾಳಿ ಪಕ್ಷಗಳ ಮುಖಂಡರ ಚಲನವಲನಗಳೇನು? ಯಾವ ಮಾಧ್ಯಮಗಳಲ್ಲಿ ವರದಿ ಹೇಗೆ ಬರುತ್ತಿದೆ? ಪತ್ರಕರ್ತರು ಯಾರನ್ನು ಭೇಟಿ ಮಾಡುತ್ತಾರೆ? ಅವರ ಹಿನ್ನಲೆ ಏನು? ಯಾವ ರಾಜಕೀಯ ಮುಖಂಡರ ಮೇಲೆ ಪ್ರಕರಣ ಇವೆ ಮುಂತಾದ ಗೂಢಚಾರಿಕೆ ಜೋರಾಗಿದೆಯಂತೆ.

ಈಗಾಗಲೇ ಸಚಿವರು ಖಾಸಗಿ ಸಮೀಕ್ಷೆ ಸಹ ನಡೆಸಿದ್ದಾರಂತೆ. ಸಮೀಕ್ಷೆಯ ಪ್ರಕಾರ ಅವರು ಗೆದ್ದಾಗಿದೆ. ಲೀಡ್ ಪ್ರಮಾಣ ಲೆಕ್ಕಾಚಾರ ಹಾಕುತ್ತಿದ್ದಾರಂತೆ. ಸಚಿವರ ‘ಆಪ್ತ’ ವಲಯದ ಮೇಲೆಯೇ ಗೂಢಚಾರಿಕೆ ನಡೆಯುತ್ತಿದೆ ಎನ್ನುವ ಮಾತುಗಳಿವೆ. ಜತೆಯಲ್ಲಿದ್ದು ‘ಕೈ’ ಕೊಡುವ ಅನುಮಾನದ ಮೇಲೆ ‘ಆಪ್ತರ’ ಮೇಲೆಯೇ ಗೂಢಚಾರಿಕೆ ನಡೆಸುತ್ತಿದ್ದಾರೆ. ಖಾಸಗಿ ಸಂಸ್ಥೆಗಳಿಂದ ಈ ಸಮೀಕ್ಷೆ, ಗೂಢಚಾರಿಕೆ ನಡೆದಿದೆ ಎನ್ನಲಾಗಿದೆ.

ADVERTISEMENT

‘ಬಹಳಷ್ಟು ಮತದಾರರು ಬಹಿರಂಗವಾಗಿ ನಮ್ಮ ಜತೆ ಗುರುತಿಸಿಕೊಳ್ಳಲು ಹೆದರುತ್ತಿದ್ದಾರೆ. ಬಹಿರಂಗವಾಗಿ ಬಂದರೆ ನಮಗೆ ತೊಂದರೆ ಮಾಡುತ್ತಾರೆ ಎನ್ನುತ್ತಿದ್ದಾರೆ’ ಎಂದು ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರು ದೂರಿದ್ದರು. ‘ನಮ್ಮ ಸುತ್ತಲೂ ಅವರ ಜನ (ಸುಧಾಕರ್ ಕಡೆಯವರು) ಇರ್ತಾರೆ’ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ನುಡಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.