ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್–ಹೀಗೆ ನಾಲ್ಕೂ ಮನೆಗಳನ್ನು ಪ್ರತಿನಿಧಿಸಿರುವ ಕರ್ನಾಟಕದ ಕೆಲವೇ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಆಯನೂರು ಮಂಜುನಾಥ್, ಈ ಬಾರಿ ಬಿಜೆಪಿ ಟಿಕೆಟ್ ಸಿಗದಿದ್ದರೆ ಶಿವಮೊಗ್ಗದಿಂದ ಸ್ಪರ್ಧೆ ಮಾಡಿಸಿಯೇ ಸಿದ್ಧ ಎಂಬ ಹಟಕ್ಕೆ ಬೀಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಕಾರಣರಂತೆ.
ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ಟಿಕೆಟ್ ಸಿಗುವ ಸಂಶಯ ದಟ್ಟವಾಗತೊಡಗಿದಂತೆ ಆಯನೂರು ಚುರುಕಾದರು. ತಾವೂ ಒಬ್ಬ ಆಕಾಂಕ್ಷಿ, ದಶಕಗಳ ಕಾಲ ಪಕ್ಷಕ್ಕಾಗಿ ದುಡಿದು, ಕಾರ್ಮಿಕ ಸಂಘಟನೆಯನ್ನು ಮುನ್ನಡೆಸಿದ್ದು, ಜಾತಿ ಲೆಕ್ಕಾಚಾರದಲ್ಲಿ ಟಿಕೆಟ್ ಕೊಡಿ ಎಂದು ವರಿಷ್ಠರ ಮೇಲೆ ಒತ್ತಡ ಹೇರಿದ್ದರು. ಟಿಕೆಟ್ ಸಿಗುವುದಿಲ್ಲ ಎನ್ನುವುದು ಅನುಮಾನ ಬಲವಾಗುತ್ತಿದ್ದಂತೆ ಕಾಲುಹೊರಗಿಡುವ ತಯಾರಿಯನ್ನೂ ನಡೆಸಿದರಂತೆ.
ಹೀಗೆ ಅವರು ಸ್ಪರ್ಧೆಗೆ ಇಳಿಯಲು ಕಾರಣವಾಗಿದ್ದು ಬೊಮ್ಮಾಯಿಯವರು ಒಡ್ಡಿದ ಸವಾಲಂತೆ ಎಂಬ ಮಾತುಗಳು ಹರಿದಾಡುತ್ತಿವೆ. ‘ವಿಧಾನಸಭೆ ಸದಸ್ಯರಿಗೆ ಹೆಚ್ಚು ಅನುದಾನ ಕೊಟ್ಟಿದ್ದೀರಿ; ವಿಧಾನಪರಿಷತ್ತಿನ ಸದಸ್ಯರ ಕ್ಷೇತ್ರವ್ಯಾಪ್ತಿ ನಾಲ್ಕೈದು ಜಿಲ್ಲೆಗಳು ಬರುತ್ತವೆ. ತಮಗೂ ಹೆಚ್ಚು ಅನುದಾನ ಕೊಡಿ’ ಎಂದು ಆಯನೂರು ಬೇಡಿಕೆ ಇಟ್ಟಿದ್ದರಂತೆ. ‘ನೀವು ಎಮ್ಮೆಲ್ಲೆ ಆಗಿ ಗೆದ್ದು ಬನ್ನಿ ಆಗ ಕೊಡುತ್ತೇವೆ’ ಎಂದು ಬೊಮ್ಮಾಯಿ ಹೇಳಿದರಂತೆ. ‘ಎಮ್ಮೆಲ್ಲೆ, ಎಂಪಿ ಎಲ್ಲ ಆಗಿದ್ದೀನಿ. ನೀವು ಎಮ್ಮೆಲ್ಸಿ ಆಗಿ ಗೆದ್ದು ರಾಜಕಾರಣ ಪ್ರವೇಶಿಸಿದವರು ಹೀಗೆ ಹೇಳಬಾರದು’ ಎಂದು ಆಯನೂರು ತಿಳಿ ಹೇಳಿದರಂತೆ. ‘ಆಯ್ತು ಗೆದ್ದು ಬನ್ನಿ’ ಎಂದು ಮತ್ತೆ ಬೊಮ್ಮಾಯಿ ಸವಾಲೊಡ್ಡುವ ರೀತಿಯಲ್ಲಿ ಹೇಳಿದಾಗ, ‘ಚಾಲೆಂಜ್ ಸ್ವೀಕರಿಸಿ ಗೆದ್ದು ಬರ್ತೀನಿ’ ಎಂದು ಆಯನೂರು ಪ್ರತಿಸವಾಲು ಒಡ್ಡಿದ್ದರಂತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.