ADVERTISEMENT

ವಿಜಯನಗರ | ಸಚಿವ ಆನಂದ್‌ ಸಿಂಗ್‌ ಬದಲು ಮಗನಿಗೆ ಬಿಜೆಪಿ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2023, 17:47 IST
Last Updated 11 ಏಪ್ರಿಲ್ 2023, 17:47 IST
   

ಹೊಸಪೇಟೆ (ವಿಜಯನಗರ): ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಮಂಗಳವಾರ ರಾತ್ರಿ ಟಿಕೆಟ್‌ ಘೋಷಿಸಿದೆ.
ವಿಜಯನಗರ ಕ್ಷೇತ್ರದಿಂದ ಸಚಿವ ಆನಂದ್‌ ಸಿಂಗ್‌ ಅವರ ಮಗ ಸಿದ್ದಾರ್ಥ ಸಿಂಗ್‌, ಹೂವಿನಹಡಗಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಕೃಷ್ಣ ನಾಯ್ಕ ಹಾಗೂ ಕೂಡ್ಲಿಗಿ ಪರಿಶಿಷ್ಟ ಪಂಗಡ ಕ್ಷೇತ್ರದ ಟಿಕೆಟ್‌ ಲೋಕೇಶ್‌ ವಿ. ನಾಯಕ ಅವರಿಗೆ ನೀಡಲಾಗಿದೆ.

ತನ್ನ ಬದಲು ಮಗನಿಗೆ ಟಿಕೆಟ್‌ ನೀಡಬೇಕೆಂದು ಆನಂದ್‌ ಸಿಂಗ್‌ ಕೋರಿದ್ದರು. ಅದಕ್ಕೆ ಪಕ್ಷ ಮನ್ನಣೆ ನೀಡಿದೆ. ಪಕ್ಷದ ಹಿರಿಯ ನಾಯಕಿ ರಾಣಿ ಸಂಯುಕ್ತಾ ಅವರು ಟಿಕೆಟ್‌ಗಾಗಿ ತೀವ್ರ ಕಸರತ್ತು ನಡೆಸಿದ್ದರು. ಆದರೆ, ಪಕ್ಷ ಅವರಿಗೆ ಮಣೆ ಹಾಕಿಲ್ಲ. ಇನ್ನೂ ಇತ್ತೀಚೆಗೆ ಕಾಂಗ್ರೆಸ್‌ನಿಂದ ಪಕ್ಷ ಸೇರ್ಪಡೆಯಾಗಿರುವ ಕೃಷ್ಣ ನಾಯ್ಕ ಹಾಗೂ ಲೋಕೇಶ್‌ ನಾಯಕ ಅವರಿಗೆ ಟಿಕೆಟ್‌ ನೀಡಲಾಗಿದ್ದು, ಮೂಲ ಬಿಜೆಪಿಯವರು ಕೆರಳುವಂತೆ ಮಾಡಿದೆ.

ಜಿಲ್ಲೆಯ ಹಗರಿಬೊಮ್ಮನಹಳ್ಳಿ ಹಾಗೂ ಹರಪನಹಳ್ಳಿಗೆ ಯಾರ ಹೆಸರು ಘೋಷಿಸಿಲ್ಲ. ಹರಪನಹಳ್ಳಿ ಕ್ಷೇತ್ರವನ್ನು ಕರುಣಾಕರ ರೆಡ್ಡಿ ಪ್ರತಿನಿಧಿಸುತ್ತಾರೆ. ಆದರೆ, ಹಾಲಿ ಶಾಸಕರಿಗೆ ಟಿಕೆಟ್‌ ಘೋಷಿಸಿಲ್ಲ. ಕರುಣಾಕರ ರೆಡ್ಡಿ ಅವರಿಗೆ ಈ ಸಲ ಟಿಕೆಟ್‌ ಕೈತಪ್ಪವುದೇ ಎಂಬ ಅನುಮಾನ ಅವರ ಬೆಂಬಲಿಗರಿಗೆ ಕಾಡುತ್ತಿದೆ.

ADVERTISEMENT

ವಿಜಯನಗರ, ಹಗರಿಬೊಮ್ಮನಹಳ್ಳಿ ಹಾಗೂ ಹೂವಿನಹಡಗಲಿಗೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಹೆಸರು ಈಗಾಗಲೇ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.