ADVERTISEMENT

ಸಕ್ರಿಯ ರಾಜಕಾರಣಕ್ಕೆ ಸದ್ಯ ಇಲ್ಲ: ನಟಿ ರಮ್ಯಾ

​ಪ್ರಜಾವಾಣಿ ವಾರ್ತೆ
Published 6 ಮೇ 2023, 12:31 IST
Last Updated 6 ಮೇ 2023, 12:31 IST
ವಿಜಯಪುರ ಜಿಲ್ಲೆ ತಿಕೋಟಾದಲ್ಲಿ ಶನಿವಾರ ರೋಡ್‌ ಶೋ ವೇಳೆ ಚಿತ್ರನಟಿ ರಮ್ಯಾ ಅವರು ಬಸವೇಶ್ವರರ ಫೋಟೊ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
ವಿಜಯಪುರ ಜಿಲ್ಲೆ ತಿಕೋಟಾದಲ್ಲಿ ಶನಿವಾರ ರೋಡ್‌ ಶೋ ವೇಳೆ ಚಿತ್ರನಟಿ ರಮ್ಯಾ ಅವರು ಬಸವೇಶ್ವರರ ಫೋಟೊ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.   

ವಿಜಯಪುರ: ಚುನಾವಣಾ ರಾಜಕೀಯಕ್ಕೆ ಬರುವ ಬಗ್ಗೆ ನಾನು ಸದ್ಯ ಯೋಚನೆ ಮಾಡಿಲ್ಲ ಎಂದು ಚಿತ್ರನಟಿ ರಮ್ಯಾ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದು ಟೀಕಿಸಿರುವ ಶಾಸಕ ಬಸನಗೌಡ ಯತ್ನಾಳ ಹೇಳಿಕೆ ಕೀಳುಮಟ್ಟದ ರಾಜಕೀಯ. ಹೆಣ್ಣು ಮಕ್ಕಳ ಮೇಲೆ ನೆಗೆಟಿವ್ ಟೀಕೆ ಸರಿಯಲ್ಲ‘ ಎಂದರು. 

‘ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಒಳ್ಳೆಯ ರಾಜಕಾರಣಿ. ಜಿಲ್ಲೆಗೆ, ನಾಡಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ. ಬರದ ನಾಡಾಗಿದ್ದ ಬಬಲೇಶ್ವರ ಕ್ಷೇತ್ರಕ್ಕೆ ನೀರು ಕೊಟ್ಟಿದ್ದಾರೆ. ಇದರಿಂದ ರೈತರು ದ್ರಾಕ್ಷಿ, ಕಬ್ಬು ಬೆಳೆಯುತ್ತಿದ್ದಾರೆ. ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಬೇಕು‘ ಎಂದು ಮನವಿ ಮಾಡಿದರು.

ADVERTISEMENT
ರೋಡ್‌ ಶೋ ವೇಳೆ ಮಾತನಾಡಿದ ರಮ್ಯಾ

‘ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುತ್ರ ಗುಂಡು ಹಾರಿಸಿ ಸಂಭ್ರಮಿಸಿರುವುದು ಸುದ್ದಿ ಕೇಳಿ ನನಗೆ ಶಾಕ್ ಆಯಿತು. ಇಂತವರ ಕೈಗೆ ಅಧಿಕಾರ ಸಿಕ್ಕರೆ ಜನರ ಭವಿಷ್ಯ ಹೇಗೆ ಎಂದು ಆತಂಕವಾಯಿತು‘ ಎಂದರು.

‘ಬಿಜೆಪಿ ಟ್ರಬಲ್ ಎಂಜಿನ್ ಸರ್ಕಾರ. 40 ಪರ್ಸೆಂಟ್ ಸರ್ಕಾರ, ಇಂತಹ ಸರ್ಕಾರದ ಪರವಾಗಿ ಪ್ರಧಾನಿ ಮೋದಿ ಪ್ರಚಾರಕ್ಕೆ ಬಂದಿರುವುದು ಬೇಸರದ ಸಂಗತಿ‘ ಎಂದರು.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಪ್ರಸ್ತಾಪಕದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ಸಂಘ, ಸಂಸ್ಥೆ ಇರಲಿ ಬ್ಯಾನ್‌ ಮಾಡುವುದಕ್ಕಿಂತ ಕಾನೂನು ಕ್ರಮಕೈಗೊಳ್ಳಬೇಕು‘ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.