ADVERTISEMENT

ಗಿಫ್ಟ್ ಕಾರ್ಡ್ ಹಂಚುತ್ತಿರುವ ಡಿಕೆಶಿ ರಣಹೇಡಿ: ಎಚ್‌ಡಿಕೆ

ಚುನಾವಣಾ ಆಯೋಗ ಬಾಗಿಲು ಮುಚ್ಚೋದು ಒಳ್ಳೆಯದು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 20:04 IST
Last Updated 26 ಏಪ್ರಿಲ್ 2024, 20:04 IST
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿ ಗ್ರಾಮದ ಸಖಿ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಶಾಯಿ ಹಚ್ಚಿದ ಬೆರಳು ಪ್ರದರ್ಶಿಸಿದರು
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿ ಗ್ರಾಮದ ಸಖಿ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಶಾಯಿ ಹಚ್ಚಿದ ಬೆರಳು ಪ್ರದರ್ಶಿಸಿದರು    

ರಾಮನಗರ: ‘ನೇರವಾಗಿ ಚುನಾವಣೆ ಎದುರಿಸಲಾಗದೆ ರಾತ್ರೋರಾತ್ರಿ ಕಳ್ಳರಂತೆ ಹೋಗಿ ಮತದಾರರಿಗೆ ಕ್ಯೂ ಆರ್ ಕೋಡ್ ಇರುವ ಗಿಫ್ಟ್ ಕಾರ್ಡ್ ಮತ್ತು ಹಣ ಹಂಚಿರುವ ಡಿ.ಕೆ ಸಹೋದರರು ನಿಜವಾದ ರಣಹೇಡಿಗಳು. ರಣಹೇಡಿ ಸಂಸ್ಕೃತಿಯ ಡಿ.ಕೆ. ಶಿವಕುಮಾರ್ ಕುತಂತ್ರ ರಾಜಕಾರಣಿ’ ಎಂದು ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಡದಿ ಸಮೀಪದ ಕೇತಗಾನಹಳ್ಳಿಯ ಸಖಿ ಮತಗಟ್ಟೆಯಲ್ಲಿ ಶುಕ್ರವಾರ ಕುಟುಂಬ ಸದಸ್ಯರೊಂದಿಗೆ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ನಾನು ನೇರವಾಗಿಯೇ ಚುನಾವಣೆ ಮಾಡುತ್ತಿದ್ದೇನೆ. ರಾಜಾರೋಷವಾಗಿ ಹಣ ಮತ್ತು ಗಿಫ್ಟ್ ಕಾರ್ಡ್‌ ಹಂಚುವುದನ್ನು ಪ್ರಜಾಪ್ರಭುತ್ವದ ಹಬ್ಬ ಎಂದು ಕರೆಯುವುದಾದರೆ ಚುನಾವಣಾ ಆಯೋಗ ಏನು ಮಾಡುತ್ತಿದೆ. ಆಯೋಗ ಬಾಗಿಲು ಮುಚ್ಚುವುದು ಒಳ್ಳೆಯದು ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ADVERTISEMENT

ಕಾಂಗ್ರೆಸ್‌ನವರು ರಾಜಾ ರೋಷವಾಗಿ ಗಿಫ್ಟ್‌ ಕಾರ್ಡ್‌ ಹಂಚುತ್ತಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಹಿಂದೆಯೇ ಹಲವು ಬಾರಿ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಈಗ ದೂರು ಕೊಟ್ಟರೆ ಏನು ಉಪಯೋಗ. ದುಡ್ಡು ಇರುವವರಿಗೆ, ಲೂಟಿ ಮಾಡುವವರಿಗೆ ಇದು ಹಬ್ಬವೇ ಹೊರತು ಜನಸಾಮಾನ್ಯರಿಗೆ ಅಲ್ಲ ಎಂದರು.

‘ಚುನಾವಣಾ ಆಯೋಗ ಎಂಬ ವ್ಯವಸ್ಥೆಯನ್ನೇ ಬದಲಾಯಿಸುವುದು ಉತ್ತಮ. ಈ ರೀತಿ ಚುನಾವಣೆ ಮಾಡುವ ಬದಲು ನೇರವಾಗಿ ಮತ್ತು ಮುಕ್ತವಾಗಿ ಗಿಫ್ಟ್ ಹಾಗೂ ಹಣ ಹಂಚುವ ವ್ಯವಸ್ಥೆಯನ್ನೇ ಆಯೋಗ ಜಾರಿಗೆ ತರಲಿ. ಅವರವರ ಶಕ್ತಿಗೆ ಅನುಸಾರ ಹಣ ಹಂಚಿ ವೋಟು ಪಡೆಯಲಿ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಅಂತಹ ವ್ಯವಸ್ಥೆ ಬಂದರೆ ಕಾಂಗ್ರೆಸ್‌ನವರಿಗೆ ಇನ್ನೂ ಒಳ್ಳೆಯದು’ ಎಂದು ವ್ಯಂಗ್ಯವಾಡಿದರು.

‘ನ್ಯಾಯಸಮ್ಮತ ಚುನಾವಣೆ ನಡೆದಿಲ್ಲ’ 

ಜ್ಯೋತಿಷಿಯೊಬ್ಬರು ಹೇಳಿದಂತೆ ₹505 ನಗದು, ಗಿಫ್ಟ್ ಕಾರ್ಡ್, ಮಲೆ ಮಹದೇಶ್ವರ ದೇವಾಲಯದ ಲಾಡು ಹಾಗೂ ಗ್ಯಾರಂಟಿ ಕಾರ್ಡ್‌ಗಳನ್ನು ಡಿ.ಕೆ ಸಹೋದರರು ರಾತ್ರಿ ಇಡೀ ಹಂಚಿದ್ದಾರೆ. ಕಾರ್ಡ್ ಹಂಚುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಜೆಡಿಎಸ್–ಬಿಜೆಪಿ ಕಾರ್ಯಕರ್ತರು ತಡೆದಿದ್ದಾರೆ. ಜಿಲ್ಲಾಧಿಕಾರಿ ಮತ್ತು ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆದಿಲ್ಲ ಎಂದು ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.