ಬೆಂಗಳೂರು: ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಗಳಾಗಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಎಚ್.ಎಲ್. ನಿರ್ಮಲಾ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಎಚ್.ಪಿ. ಶಿವಪ್ರಕಾಶ್ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.
ಮೈಸೂರು ಬ್ಯಾಂಕ್ ವೃತ್ತದ ಬಳಿ ಇರುವ ಹುತಾತ್ಮ ಸ್ಮಾರಕಕ್ಕೆ ನಮನವನ್ನು ಸಲ್ಲಿಸಿ ಮೆರವಣಿಗೆ ಮೂಲಕ ತೆರಳಿ ನಾಮಪತ್ರವನ್ನು ಸಲ್ಲಿಸಿದರು.
ಅಭ್ಯರ್ಥಿ ನಿರ್ಮಲಾ ಮಾತನಾಡಿ, ‘ನಮ್ಮನ್ನು ಬಂಡವಾಳಶಾಹಿ ಪಕ್ಷಗಳೇ ಆಳುತ್ತಿವೆ. ದೇಶದಲ್ಲಿ ಶಿಕ್ಷಣದ ವ್ಯಾಪಾರೀಕರಣವಾಗಿದೆ, ನಿರುದ್ಯೋಗ ಸಮಸ್ಯೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ, ರೈತರ ಆತ್ಮಹತ್ಯೆ ಹೆಚ್ಚುತ್ತಾ ಹೋಗಿದೆ. ಜನ ವಿರೋಧಿ, ಬಂಡವಾಳಶಾಹಿಗಳನ್ನು ಸೋಲಿಸಬೇಕು. ಜನಪರ ಹೋರಾಟದ ಅಭ್ಯರ್ಥಿಯನ್ನು ಆರಿಸಬೇಕು’ ಎಂದು ಮನವಿ ಮಾಡಿದರು.
ಅಭ್ಯರ್ಥಿ ಎಚ್.ಪಿ. ಶಿವಪ್ರಕಾಶ್ ಮಾತನಾಡಿ, ‘ದೇಶದ ಜ್ವಲಂತ ಸಮಸ್ಯೆಗಳಿಗೆ ಸರ್ಕಾರಗಳು ಸ್ವಂದಿಸುತ್ತಿಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ವಿಚಾರಗಳನ್ನು, ಆದರ್ಶಗಳನ್ನು ಅಳವಡಿಸಿಕೊಂಡು ಜನಪರ ಹೋರಾಟ ಮಾಡುತ್ತಿರುವ ಪಕ್ಷ ನಮ್ಮದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.