ADVERTISEMENT

ಲೋಕಸಭೆ ಚುನಾವಣೆಯಲ್ಲಿ NDA ಮೈತ್ರಿಕೂಟವನ್ನು ಸೋಲಿಸಿ: ಕಮ್ಯೂನಿಸ್ಟ್ ಪಕ್ಷ ಕರೆ

ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆ ಎಂದು ಟೀಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 15:03 IST
Last Updated 16 ಏಪ್ರಿಲ್ 2024, 15:03 IST
ಸಿಪಿಐ(ಎಂ)
ಸಿಪಿಐ(ಎಂ)   

ಬೆಂಗಳೂರು: ‘ದೇಶವನ್ನು ರಕ್ಷಿಸಲು ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಿ, ‘ಇಂಡಿಯಾ’ ಮೈತ್ರಿಕೂಟವನ್ನು ಬೆಂಬಲಿಸಬೇಕು’ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಕರ್ನಾಟಕ ರಾಜ್ಯ ಸಮಿತಿ ಮನವಿ ಮಾಡಿಕೊಂಡಿದೆ. 

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಗ್ಗೆ ಮಾತನಾಡಿದ ಸಮಿತಿ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್, ‘ದೇಶದ ಆರ್ಥಿಕ ಸಾರ್ವಭೌಮತೆಯನ್ನು ರಕ್ಷಿಸಲು ನಮ್ಮ ಪಕ್ಷ ಬದ್ಧವಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತದಿಂದಾಗಿ ದೇಶವು ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವು ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸಂವಿಧಾನದ ನಾಲ್ಕು ಆಧಾರ ಸ್ತಂಭಗಳನ್ನು ವ್ಯವಸ್ಥಿತವಾಗಿ ಕಳಚಿ ಹಾಕುತ್ತಿರುವ ಪ್ರಕ್ರಿಯೆಗೆ ದೇಶ ಸಾಕ್ಷಿಯಾಗುತ್ತಿದೆ. ದುಡಿಯುವ ಜನರ ಹಕ್ಕುಗಳನ್ನು ನಾಶಮಾಡಲು ಮೋದಿ ಸರ್ಕಾರವು ಸರ್ವಾಧಿಕಾರಿ-ಕೋಮುವಾದಿ ಆಳ್ವಿಕೆಯ ಫ್ಯಾಸಿಸ್ಟ್ ಮಾದರಿಯ ವಿಧಾನಗಳನ್ನು ಬಳಸುತ್ತಿದೆ. ಸರ್ಕಾರದ ಅಧಿಕಾರ ಯಂತ್ರಗಳನ್ನು ಮತ್ತು ತನ್ನ ಸಂಸದೀಯ ಬಹುಮತವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಆರೋಪಿಸಿದರು. 

ಸಮಿತಿಯ ಸದಸ್ಯ ಪ್ರಕಾಶ್ ಕೆ., ‘ಭಾರತದ ಆರ್ಥಿಕತೆಯು ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನ್ನುವುದು ಸತ್ಯಕ್ಕೆ ದೂರವಾಗಿದೆ. ವಾಸ್ತವವನ್ನು ಮರೆಮಾಚಿ, ಸುಳ್ಳು ಮಾಹಿತಿಗಳನ್ನು ಕೇಂದ್ರ ಸರ್ಕಾರ ಒದಗಿಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ರದ್ದತಿ ಸೇರಿ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕಿದೆ. ಬೆಲೆ ಏರಿಕೆ ನಿಯಂತ್ರಿಸುವ ನೀತಿಗಳನ್ನು ಜಾರಿಗೊಳಿಸಬೇಕಿದೆ. ಆದ್ದರಿಂದ ಎಡ ಪಕ್ಷಗಳ ಬಲವನ್ನು ಹೆಚ್ಚಿಸಬೇಕು’ ಎಂದರು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.