ADVERTISEMENT

ಲೋಕಸಭೆ ಚುನಾವಣೆ | ಸುಧಾಕರ್‌ ಭೇಟಿ ಮಾಹಿತಿಯೇ ಇರಲಿಲ್ಲ: ಶಾಸಕ ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 23:30 IST
Last Updated 1 ಏಪ್ರಿಲ್ 2024, 23:30 IST
ಎಸ್‌.ಆರ್‌. ವಿಶ್ವನಾಥ್‌
ಎಸ್‌.ಆರ್‌. ವಿಶ್ವನಾಥ್‌   

ಯಲಹಂಕ: ‘ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್‌ ನನ್ನನ್ನು ಭೇಟಿಯಾಗಲು ಬರುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.  ಫೋನ್‌ ಕೂಡಾ ಮಾಡಿರಲಿಲ್ಲ’ ಎಂದು ಶಾಸಕ ಎಸ್‌.ಆರ್‌. ವಿಶ್ವನಾಥ್‌ ಸ್ಪಷ್ಟಪಡಿಸಿದರು.

‘ಭೇಟಿ ಮಾಡುವುದಾದರೆ ಸಹಜವಾಗಿ ಒಬ್ಬರೇ ಬರಬೇಕಾಗಿತ್ತು. ಅದುಬಿಟ್ಟು ಮಾಧ್ಯಮದವರಿಗೆ ಮಾಹಿತಿ ನೀಡಿ, ಅವರೊಂದಿಗೆ ಬರುವ ಪ್ರಮೇಯ ಏನಿತ್ತು? ಇದಕ್ಕೆ ದೊಡ್ಡ ಪ್ರಚಾರ ಪಡೆದು, ಅನುಕಂಪ ಗಿಟ್ಟಿಸುವ ಅವಶ್ಯಕತೆಯೇನಿತ್ತು’ ಎಂದು ಪ್ರಶ್ನಿಸಿದ ಅವರು, ‘ಫೋನ್‌ ಮಾಡಿ ಬಂದಿದ್ದರೆ ಇದಕ್ಕೆ ಪುರಾವೆ ಒದಗಿಸಲಿ’ ಎಂದು ಸವಾಲು ಹಾಕಿದರು.

‘ಯಲಹಂಕದವರನ್ನು ಒಂದು ರೀತಿಯಲ್ಲಿ ಖಳನಾಯಕರಂತೆ ಬಿಂಬಿಸಲು ಹೊರಟಿದ್ದಾರೆ. ಮೊದಲು ಅವರ ವರ್ತನೆಯನ್ನು ಬದಲಿಸಿಕೊಳ್ಳಬೇಕು. ನನ್ನ ಮಗನಿಗೆ ಟಿಕೆಟ್‌ ಸಿಕ್ಕಿಲ್ಲ. ಇದರಿಂದ ಬೇಸರದಲ್ಲಿದ್ದಾರೆ ಎಂದು ಪದೇ ಪದೇ ಹೇಳುವುದನ್ನು ಬಿಡಬೇಕು. ನನ್ನ ಅಥವಾ ಮುಖಂಡರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು’ ಎಂದರು. 

ADVERTISEMENT

‘ಯಲಹಂಕದಲ್ಲಿ ಸುಧಾಕರ್‌ ಹೆಸರು ಹೇಳಿ ಮತ ಕೇಳಿದರೆ ಮೈನಸ್‌ ಆಗಬಹುದು. ನರೇಂದ್ರ ಮೋದಿ ಅವರ ಹೆಸರು ಹೇಳಿ ಮತ ಕೇಳಿದರೆ ಪ್ಲಸ್‌ ಆಗಲಿದೆ. ಚುನಾವಣೆಯಲ್ಲಿ ಯಾವ ರೀತಿ ಜವಾಬ್ದಾರಿ ನಿರ್ವಹಿಸಬೇಕು ಮತ್ತು ಕಾರ್ಯತಂತ್ರ ರೂಪಿಸಬೇಕು ಎಂಬುದರ ಬಗ್ಗೆ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಂಡು, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನಿಸಲಾಗುವುದು. ಇದರಲ್ಲಿ ಯಾವುದೇ ಸಂಶಯಬೇಡ’ ಎಂದು ಸ್ಪಷ್ಟಪಡಿಸಿದರು.

ಡಾ.ಕೆ. ಸುಧಾಕರ್‌ ಅವರು ಭಾನುವಾರ ಎಚ್‌.ಎಸ್‌. ವಿಶ್ವನಾಥ್‌ ಅವರನ್ನು ಭೇಟಿಯಾಗಲು ಬಂದಿದ್ದರು. ಆದರೆ ವಿಶ್ವನಾಥ್‌ ಭೇಟಿಯಾಗಲು ಸಿಕ್ಕಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.