ಬೆಂಗಳೂರು: ರಾಜ್ಯ ನಾಯಕರು ಸಿದ್ಧಪಡಿಸಿದ್ದ ಪಟ್ಟಿಗೆ ಬಿಜೆಪಿ ವರಿಷ್ಠರಾದ ಅಮಿತ್ ಶಾ ಹಾಗೂ ರಾಮಲಾಲ್ ಒಪ್ಪಿಗೆ ಸೂಚಿಸದೇ ಇರುವುದರಿಂದ ‘ಕಮಲ’ ಪಾಳೆಯದ ಹುರಿಯಾಳುಗಳ ಪಟ್ಟಿಗೆ ಇನ್ನೂ ಮೋಕ್ಷ ಸಿಕ್ಕಿಲ್ಲ.
ಇದನ್ನೂ ಓದಿ:ಖರ್ಗೆ ಎದುರು ಬಿಜೆಪಿಯಿಂದ ರತ್ನಪ್ರಭಾ?
ಮೂರಕ್ಕೂ ಹೆಚ್ಚು ಹಾಲಿ ಸಂಸದರ ಸಾಧನೆ ತೃಪ್ತಿಕರವಾಗಿಲ್ಲ ಹಾಗೂ ವಲಸಿಗರಿಗೆ ಮಣೆ ಹಾಕುವುದು ಸರಿಯಲ್ಲ ಎಂಬ ಅಭಿಪ್ರಾಯ ಮಂಗಳವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಚರ್ಚೆಗೆ ಬಂದಿತ್ತು ರಾಜ್ಯ ಪ್ರಮುಖರ ಸಮಿತಿ
ಯಲ್ಲಿ ಶಿಫಾರಸು ಮಾಡಿದ್ದ 10ಕ್ಕೂ ಹೆಚ್ಚು ಅಭ್ಯರ್ಥಿಗಳ ಬಗ್ಗೆ ವರಿಷ್ಠರು ಅತೃಪ್ತಿ ತೋರಿದರು. ಅಭ್ಯರ್ಥಿಗಳ ಆಯ್ಕೆಯನ್ನು ಪ್ರಧಾನಿ ನರೇಂದ್ರ ಮೋದಿ ವಿವೇಚನೆಗೆ ಬಿಡಲಾಗಿದೆ.
ಶೋಭಾಗೆ ಕೊಕ್?: ಉಡುಪಿ–ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಸಿಗುವುದು ಅನುಮಾನ. ಬಾಗಲಕೋಟೆ, ಕೊಪ್ಪಳ, ಬೆಳಗಾವಿ ಕ್ಷೇತ್ರಗಳ ಸಂಸದರ ಬದಲು ಬೇರೆಯವರಿಗೆ ಟಿಕೆಟ್ ನೀಡುವ ಸಂಭವ ಇದೆ.
ಗೆದ್ದ ಮೇಲೆ ಬಿಜೆಪಿ ಸೇರಲು ಸುಮಲತಾ ಅಂಬರೀಷ್ ಒಪ್ಪುವುದಾದರೆ ಅವರಿಗೆ ಬೆಂಬಲ ನೀಡುವ ಷರತ್ತು ಒಡ್ಡಲಾಗುವುದು. ಅದಕ್ಕೆ ಒಪ್ಪದಿದ್ದರೆ ಅಶ್ವತ್ಥ ನಾರಾಯಣ ಕಣಕ್ಕೆ ಇಳಿಸುವ ಚರ್ಚೆ ನಡೆದಿದೆ.
ತುಮಕೂರಿನಿಂದ ಜಿ.ಎಸ್. ಬಸವರಾಜು, ರಾಯಚೂರಿನಿಂದ ಅಮರೇಶ ನಾಯಕ, ಹಾಸನದಿಂದ ಎ. ಮಂಜು, ಬೆಂಗಳೂರು ಗ್ರಾಮಾಂತರದಲ್ಲಿ ನಿಶಾ(ಯೋಗೇಶ್ವರ್ ಪುತ್ರಿ) ಕೋಲಾರದಲ್ಲಿ ಛಲವಾದಿ ನಾರಾಯಣಸ್ವಾಮಿ, ಚಿತ್ರದುರ್ಗದಲ್ಲಿ ಆನೇಕಲ್ ನಾರಾಯಣಸ್ವಾಮಿ, ಬಳ್ಳಾರಿಯಲ್ಲಿ ದೇವೇಂದ್ರಪ್ಪ ಅವರನ್ನು ಕಣಕ್ಕೆ ಇಳಿಸುವ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
***
ಈ ಬಾರಿ ಮೂವರು ಮಹಿಳೆಯರಿಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಶಿಫಾರಸು ಮಾಡಿದ್ದೇವೆ. ಕನಿಷ್ಠ 22 ಸ್ಥಾನಗಳಲ್ಲಿ ಗೆಲ್ಲುವುದು ಖಚಿತ.
- ಬಿ.ಎಸ್. ಯಡಿಯೂರಪ್ಪ,ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.