ADVERTISEMENT

ಮಹಾರಾಷ್ಟ್ರದಿಂದ ಕೇರಳದ ವಯನಾಡಿಗೆ ಸಾಗಿಸುತ್ತಿದ್ದ ₹9 ಲಕ್ಷ ಮೌಲ್ಯದ ಮದ್ಯ ವಶ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 11:09 IST
Last Updated 2 ಏಪ್ರಿಲ್ 2019, 11:09 IST
ಕೊಡಗು ಜಿಲ್ಲೆಯ ಅಬಕಾರಿ ಸಿಬ್ಬಂದಿ ವಶ ಪಡಿಸಿಕೊಂಡ ಮದ್ಯ
ಕೊಡಗು ಜಿಲ್ಲೆಯ ಅಬಕಾರಿ ಸಿಬ್ಬಂದಿ ವಶ ಪಡಿಸಿಕೊಂಡ ಮದ್ಯ   

ಮಡಿಕೇರಿ: ಕೇರಳ ರಾಜ್ಯದ ವಯನಾಡಿಗೆ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ ಅಪಾರ ಪ್ರಮಾಣದ ಮದ್ಯವನ್ನು ಅಬಕಾರಿ ಇಲಾಖೆ ಸಿಬ್ಬಂದಿ, ಮಂಗಳವಾರ ವಶಪಡಿಸಿಕೊಂಡಿದ್ದಾರೆ.

ಸೊಲ್ಲಾಪುರದ ಶಂಕರ್ ಹಾಗೂ ಸುರೇಶ್‌ ಎಂಬುವರನ್ನು ಬಂಧಿಸಿ, ಅಂದಾಜು ₹ 9 ಲಕ್ಷ ಮೌಲ್ಯದ 2,615 ಲೀಟರ್‌ ಮದ್ಯ ಹಾಗೂ ಲಾರಿ ವಶಕ್ಕೆ ಪಡೆಯಲಾಗಿದೆ.

ಗೋವಾದ ಮದ್ಯ ಸೇರಿ ಲೇಬಲ್‌ ರಹಿತ ನಕಲಿ ಮದ್ಯ ಬಾಟಲ್‌ಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದರು. ಲಾರಿ ಮೇಲೆ ವಿಆರ್‌ಎಲ್‌ ಲಾಗಿಸ್ಟಿಕ್‌ ಸಂಸ್ಥೆಯ ನಕಲಿ ಸ್ಟಿಕರ್‌ ಅಂಟಿಸಿಕೊಂಡು ಮದ್ಯವನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿತ್ತು ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ವೀರಣ್ಣ ಬಾಗೇವಾಡಿ ತಿಳಿಸಿದ್ದಾರೆ.

ADVERTISEMENT

ಖಚಿತ ಮಾಹಿತಿ ಮೇರೆಗೆ ಮಂಗಳವಾರ ಮುಂಜಾನೆ 4ರ ಸುಮಾರಿಗೆ ಗೋಣಿಕೊಪ್ಪದ ಚೆಕ್‌ಪೋಸ್ಟ್‌ನಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ಮದ್ಯ ವಶಕ್ಕೆ ಪಡೆಯಲಾಗಿದೆ. ಲೇಬಲ್‌ ರಹಿತ ಮದ್ಯ ಬಾಟಲ್‌ಗಳು ನಕಲಿಯಾಗಿದ್ದು, ಅದರ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗುವುದು ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ವೀರಣ್ಣ ಬಾಗೇವಾಡಿ ಮಾಹಿತಿ ನೀಡಿದ್ದಾರೆ.

ಲಾರಿಯ ಹಿಂಭಾಗದಲ್ಲಿ ಪ್ರತ್ಯೇಕ ವಿಭಾಗ ಮಾಡಿಕೊಂಡು ಅದರಲ್ಲಿ ಮದ್ಯವನ್ನು ತುಂಬಿಸಲಾಗಿತ್ತು. ಹಿಂಭಾಗದಿಂದ ನೋಡಿದರೆ ಖಾಲಿ ಲಾರಿ ಎಂದು ತಿಳಿಯುತ್ತಿತ್ತು. ಸಿಬ್ಬಂದಿ ಪ್ರತ್ಯೇಕ ವಿಭಾಗದ ಲಾಕ್‌ ತೆಗೆದಾಗ ಮದ್ಯ ತುಂಬಿಸಿರುವುದು ಬೆಳಕಿಗೆ ಬಂತು ಎಂದು ಮಾಹಿತಿ ನೀಡಿದ್ದಾರೆ.

ತಂಡ ರಚಿಸಲಾಗಿತ್ತು: ಕೊಡಗು ಜಿಲ್ಲೆಯ ಪೆರಂಬಾಡಿ ಮಾರ್ಗದ ಮೂಲಕ ಕೇರಳಕ್ಕೆ ಆಗ್ಗಾಗ್ಗೆ ಮದ್ಯವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿರು ಮಾಹಿತಿ ಲಭಿಸಿದ್ದರಿಂದ ಒಂದು ಕಾರ್ಯಪಡೆಯನ್ನೇ ರಚಿಸಲಾಗಿತ್ತು. ಒಂದು ವಾರದಿಂದ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಈ ಪ್ರಕರಣದಲ್ಲಿ ಲಾರಿ ಚಾಲಕರು ಮೂರು ಗಂಟೆಗೊಮ್ಮೆ ಬದಲಾವಣೆ ಆಗಿರುವ ಸಾಧ್ಯತೆಯಿದೆ. ಈ ಮದ್ಯದ ಮೂಲವನ್ನು ಪತ್ತೆ ಮಾಡಲು ಹೆಚ್ಚಿನ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ವೀರಣ್ಣ ತಿಳಿಸಿದ್ದಾರೆ.

ನಗದು ವಶ

ಕುಶಾಲನಗರ ಸಮೀಪದ ಕೊಪ್ಪ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೇ ಸಾಗಣೆ ಮಾಡುತ್ತಿದ್ದ ₹ 6.31 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಕೇರಳದ ಸಂತೋಷ್‌ ಹಾಗೂ ಜೀವನ್‌ ಈ ಹಣ ಸಾಗಣೆ ಮಾಡುತ್ತಿದ್ದರು. ಜೀಪ್‌ ತಡೆದು ತಪಾಸಣೆ ನಡೆಸುವಾಗ ಹಣ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.