ADVERTISEMENT

ಒಡಿಶಾ: ಕಾಂಗ್ರೆಸ್‌ನಲ್ಲಿ ಟಿಕೆಟ್‌ ವಾಪ್ಸಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 18:39 IST
Last Updated 10 ಏಪ್ರಿಲ್ 2019, 18:39 IST

ಭುವನೇಶ್ವರ: ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಮತ್ತು ಒಡಿಶಾದ ಮಾಜಿ ಸಚಿವ ಸೀತಾಕಾಂತ ಮಹಾಪಾತ್ರ ಅವರಿಗೆ ಕರಾವಳಿಯ ಬದ್‌ಚಾನಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿತ್ತು. ಆದರೆ, ಈ ಟಿಕೆಟ್‌ ಅನ್ನು ಅವರು ತಿರಸ್ಕರಿಸಿದ್ದಾರೆ. ಮೂರು ಬಾರಿ ಇಲ್ಲಿಂದ ಅವರು ಗೆದ್ದಿದ್ದಾರೆ. ಆದರೆ ಈ ಬಾರಿ ಕಣಕ್ಕೆ ಇಳಿಯುವುದಕ್ಕೆ ಅವರು ಮನಸ್ಸು ಮಾಡಿಲ್ಲ. ಇದು ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ.

ಪ್ರಚಾರಕ್ಕೆ ಬೇಕಾದಷ್ಟು ಸಮಯವನ್ನು ಪ‍ಕ್ಷ ಕೊಟ್ಟಿಲ್ಲ. ಅಲ್ಪ ಅವಧಿಯಲ್ಲಿ ಪ್ರಚಾರ ಮಾಡಿ ಗೆಲ್ಲಲಾಗದು ಎಂದು ಪಕ್ಷಕ್ಕೆ ಮಹಾಪಾತ್ರ ತಿಳಿಸಿದ್ದಾರೆ.

ಕಾಂಗ್ರೆಸ್‌ ಟಿಕೆಟ್‌ ವಾಪಸ್‌ ಕೊಟ್ಟವರು ಅವರೊಬ್ಬರೇ ಅಲ್ಲ, ಆರೇಳು ಮಂದಿ ಈಗಾಗಲೇ ಟಿಕೆಟ್‌ ವಾಪಸ್‌ ಮಾಡಿದ್ದಾರೆ. ಮತದಾನಕ್ಕೆ ಕೆಲವೇ ದಿನಗಳಿರುವಾಗ ಆಯ್ಕೆಯಾದ ಅಭ್ಯರ್ಥಿಗಳು ಟಿಕೆಟ್‌ ವಾಪಸ್‌ ಮಾಡುತ್ತಿರುವುದು ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಅವಮಾನವಾಗಿ ಕಾಡುತ್ತಿದೆ.

ADVERTISEMENT

ಪಿಪ್ಲಿಯಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯುಧಿಷ್ಠಿರ ಸಮಂತರಾಯ್‌, ಮಾಜಿ ಸಂಸದ ಬಿಭು ಪ್ರಸಾದ್‌ ತಾರಾಯ್‌, ಮಾಜಿ ಮುಖ್ಯಮಂತ್ರಿ ಜೆ.ಬಿ. ಪಟ್ನಾಯಕ್‌ ಅವರ ಮಗ ಪೃಥ್ವಿ ವಲ್ಲಭ ಪಟ್ನಾಯಕ್‌ ಅವರೂ ಟಿಕೆಟ್‌ ವಾಪಸ್‌ ಕೊಟ್ಟಿದ್ದಾರೆ. ಪೃಥ್ವಿ ಅವರಿಗೆ ಜೆ.ಬಿ.ಪ‍ಟ್ನಾಯಕ್‌ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದಲೇ ಟಿಕೆಟ್‌ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.