ಹುಣಸೂರು: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರ ಚುನಾವಣಾ ಪ್ರಚಾರಕ್ಕೆ ಸಾರ್ಜನಿಕರು ಅಡ್ಡಿಪಡಿಸಿದ ಘಟನೆ ತಡವಾಗಿ ವರದಿಯಾಗಿದೆ.
ತಾಲ್ಲೂಕಿನ ಬನ್ನಿಕುಪ್ಪೆ, ಕಟ್ಟೆಮಳಲವಾಡಿ ಮತ್ತು ಬೀಜಗನಹಳ್ಳಿ ಗ್ರಾಮಗಳಲ್ಲಿ ಸಂಸದ ವಿಶ್ವನಾಥ್ ಮತ್ತು ಶಾಸಕ ಮಂಜುನಾಥ್ ಚುನಾವಣಾ ಪ್ರಚಾರಕ್ಕೆ ತೆರಳಿದಾಗ ಸ್ಥಳೀಯರು ಗ್ರಾಮಕ್ಕೆ 5 ವರ್ಷಗಳಲ್ಲಿ ಒಂದು ಬಾರಿಯೂ ಭೇಟಿ ನೀಡಿಲ್ಲ. ಸಮಸ್ಯೆಗಳನ್ನು ಆಲಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪ್ರಚಾರಕ್ಕೆ ಅಡ್ಡಿಪಡಿಸಿದರು. ಅಲ್ಲದೆ, ಪ್ರಚಾರ ಸಭೆ ಆಯೋಜಿಸಿದ್ದ ಸ್ಥಳದತ್ತ ಕೂಡ ಗ್ರಾಮಸ್ಥರು ಸುಳಿಯಲಿಲ್ಲ.
ಕಟ್ಟೆಮಳಲವಾಡಿ ಗ್ರಾಮದಲ್ಲಿ ಪ್ರಚಾರ ಸಭೆ ನಡೆಸುತ್ತಿದ್ದಾಗ ಸಾರ್ವಜನಿಕರು ವಿಶ್ವನಾಥ್ ಅವರ ವಿರುದ್ಧ ಘೋಷಣೆ ಕೂಗಿ ಸಂಸದರು ಗ್ರಾಮಕ್ಕೆ ಮೂಲ ಸವಲತ್ತು ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆಪಾದಿಸಿದ್ದಾರೆ.
ಸಂಸದ ವಿಶ್ವನಾಥ್ ತಪ್ಪು ಮರುಕಳಿಸದಂತೆ ನಡೆದುಕೊಳ್ಳುವುದಾಗಿ ವಿನಂತಿಸಿಕೊಂಡರೂ ಗ್ರಾಮಸ್ಥರು ಅವರಿಗೆ ಚುನಾವಣಾ ಪ್ರಚಾರ ನಡೆಸಲು ಅವಕಾಶ ನೀಡದೆ ಗ್ರಾಮದಿಂದ ಹೊರಕ್ಕೆ ಕಳುಹಿಸಿದ ಘಟನೆ ನಡೆದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.