ADVERTISEMENT

ಮುಖಾಮುಖಿ: ಛಿಂದ್ವಾರಾ (ಮಧ್ಯಪ್ರದೇಶ)

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
<div class="paragraphs"><p>ನಕುಲ್‌ನಾಥ್‌ ಮತ್ತು&nbsp; ವಿವೇಕ್‌ ಬಂಟಿ ಸಾಹು</p></div>

ನಕುಲ್‌ನಾಥ್‌ ಮತ್ತು  ವಿವೇಕ್‌ ಬಂಟಿ ಸಾಹು

   

ನಕುಲ್‌ನಾಥ್‌ (ಕಾಂಗ್ರೆಸ್‌)

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ಹಿಡಿತವಿರುವ ಛಿಂದ್ವಾರಾ ಲೋಕಸಭಾ ಕ್ಷೇತ್ರದಿಂದ ಈ ಬಾರಿಯೂ ಅವರ ಪುತ್ರ ನಕುಲ್‌ನಾಥ್‌ ಅವರನ್ನು ಕಾಂಗ್ರೆಸ್‌ ಸ್ಪರ್ಧೆಗಿಳಿಸಿದೆ. 1980ರಿಂದ 2014ರವರೆಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕಮಲ್‌ನಾಥ್‌ ಅವರು ಸದ್ಯ ಛಿಂದ್ವಾರಾ ಕ್ಷೇತ್ರದ ಶಾಸಕರಾಗಿದ್ದಾರೆ. ತಂದೆಯನ್ನು ಹಲವು ವರ್ಷಗಳ ಕಾಲ ಗೆಲ್ಲಿಸಿದ್ದ ಮತದಾರರು ನಕುಲ್‌ ಅವರನ್ನು ಎರಡನೇ ಬಾರಿಯೂ ಕೈಬಿಡಲಾರರು ಎಂಬ ವಿಶ್ವಾಸದಲ್ಲಿದ್ದಾರೆ ಕಾಂಗ್ರೆಸ್‌ ನಾಯಕರು. 2019ರ ಚುನಾವಣೆಯಲ್ಲಿ ನಕುಲ್‌ನಾಥ್‌ ಅವರು 37,536 ಮತಗಳ ಅಂತರದಿಂದ ಬಿಜೆಪಿಯ ನಾಥನ್‌ ಶಾ ಅವರನ್ನು ಪರಾಭವಗೊಳಿಸಿದ್ದರು. ಕಮಲ್‌ನಾಥ್‌ ಮತ್ತು ನಕುಲ್‌ನಾಥ್‌ ಅವರು ಬಿಜೆಪಿಗೆ ಸೇರುತ್ತಾರೆಂಬ ಊಹಾಪೋಹಗಳು ಎರಡು ತಿಂಗಳ ಹಿಂದೆ ದಟ್ಟವಾಗಿತ್ತು. ನಕುಲ್‌ನಾಥ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಕಾಂಗ್ರೆಸ್‌ ಉಲ್ಲೇಖವನ್ನೂ ಕೈಬಿಟ್ಟಿದ್ದರು. ಬಳಿಕ ಪಕ್ಷದಲ್ಲೇ ಉಳಿಯುವುದಾಗಿ ಕಮಲ್‌ನಾಥ್‌ ಅವರು ಸ್ಪಷ್ಟಪಡಿಸಿದ್ದರು.

ವಿವೇಕ್‌ ಬಂಟಿ ಸಾಹು (ಬಿಜೆಪಿ)

ವಿಧಾನಸಭಾ ಚುನಾವಣೆಯಲ್ಲಿ ಎರಡು ಬಾರಿ ಕಮಲ್‌ನಾಥ್‌ ವಿರುದ್ಧ ಸ್ಪರ್ಧಿಸಿ ಸೋತಿದ್ದ ವಿವೇಕ್‌ ಬಂಟಿ ಸಾಹು ಅವರನ್ನು ಬಿಜೆಪಿಯು ಛಿಂದ್ವಾರಾ ಕ್ಷೇತ್ರದಿಂದ ಅಖಾಡಕ್ಕಿಳಿಸಿದೆ. ಪಕ್ಷದ ಛಿಂದ್ವಾರಾ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ವಿವೇಕ್‌ ಅವರು ಸ್ಥಳೀಯವಾಗಿಯೂ ಸಾಕಷ್ಟು ಪ್ರಭಾವವಿರುವ ಮುಖಂಡರಾಗಿದ್ದಾರೆ. ಈ ಬಾರಿ ಕ್ಷೇತ್ರವನ್ನು ಕಮಲ್‌ನಾಥ್‌ ಅವರ ಹಿಡಿತದಿಂದ ಮುಕ್ತಗೊಳಿಸಬೇಕೆಂದು ಪಣ ತೊಟ್ಟಿರುವ ಬಿಜೆಪಿ ಮುಖಂಡರು, ವಿವೇಕ್‌ ಅವರ ಗೆಲುವಿಗಾಗಿ ಅವಿರತವಾಗಿ ಪ್ರಚಾರ ಮಾಡುತ್ತಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯವರ್ಗೀಯ ಅವರನ್ನು ಛಿಂದ್ವಾರಾದ ಉಸ್ತುವಾರಿಯನ್ನಾಗಿಯೂ ಬಿಜೆಪಿ ನೇಮಿಸಿದೆ. ಈ ಕ್ಷೇತ್ರದಲ್ಲಿ ಬಿಜೆಪಿಗೆ ಇದುವರೆಗೆ ಒಮ್ಮೆ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿರುವುದರಿಂದ ಈ ಬಾರಿ ವಿವೇಕ್‌ ಅವರು ಗೆದ್ದೇ ಗೆಲ್ಲುತ್ತಾರೆ ಎಂಬುದು ಬಿಜೆಪಿ ಮುಖಂಡರ ವಿಶ್ವಾಸ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.