ADVERTISEMENT

ಕರ್ನಾಟಕದಲ್ಲಿರುವುದು ‘ಸೀದಾ ರುಪೈ ಸರ್ಕಾರ್‌’: ರಾಜ್ಯ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 13:07 IST
Last Updated 27 ಫೆಬ್ರುವರಿ 2018, 13:07 IST
ದಾವಣಗೆರೆಯಲ್ಲಿ ಮಂಗಳವಾರ ನಡೆದ ‘ರೈತ ಬಂಧು ಯಡಿಯೂರಪ್ಪ’ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ದಾವಣಗೆರೆಯಲ್ಲಿ ಮಂಗಳವಾರ ನಡೆದ ‘ರೈತ ಬಂಧು ಯಡಿಯೂರಪ್ಪ’ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.   

ದಾವಣಗೆರೆ: ‘ರಾಜ್ಯದಲ್ಲಿ ಇರುವುದು ‘ಸಿದ್ದರಾಮಯ್ಯ’ ಸರ್ಕಾರ ಅಲ್ಲ, ‘ಸೀದಾ ರುಪೈ ಸರ್ಕಾರ್‌’ ಸರ್ಕಾರ. ಇಲ್ಲಿ ಯಾವುದೆ ಕೆಲಸಕ್ಕಾದರೂ 'ರೂಪಾಯಿ' ಕೊಡದಿದ್ದರೆ ಕೆಲಸ ಆಗುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

‘ನಿಮ್ಮ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅಲ್ಲ, ‘ಸೀದಾ ರುಪೈ’ ಸಿಎಂ (ದುಡ್ಡು ಕೊಟ್ಟರೆ ಕೆಲಸ). ಕರ್ನಾಟಕದಲ್ಲಿ ಈ ‘ಸೀದಾ ರುಪೈ ಸರ್ಕಾರ್‌’, ‘ಸೀದಾ ರುಪೈ ವ್ಯಕ್ತಿ ಸರ್ಕಾರ್‌’, ‘ಸೀದಾ ರುಪೈ ವ್ಯಕ್ತಿ ಸಂಸ್ಕೃತಿ ಸರ್ಕಾರ್‌’ ಬೇಕಾ?’ ಎಂದು ಸೇರಿದ್ದ ಕಾರ್ಯಕರ್ತರನ್ನು ಪ್ರಶ್ನಿಸಿದ ಮೋದಿ, ‘ಕರ್ನಾಟಕಕ್ಕೆ ಇಂತಹ ಸರ್ಕಾರ ಶೋಭೆ ತರುವುದಿಲ್ಲ. ಜವಾಬ್ದಾರಿಯುತ, ಪ್ರಾಮಾಣಿಕ ಸರ್ಕಾರದ ಅವಶ್ಯಕತೆ ಕರ್ನಾಟಕಕ್ಕೆ ಬೇಕಿದೆ’ ಎಂದು ಹೇಳಿದರು.

ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ‘ರೈತ ಬಂಧು ಯಡಿಯೂರಪ್ಪ’ ಸಮಾವೇಶದಲ್ಲಿ ಅವರು ಮಾತನಾಡಿದರು.

ADVERTISEMENT

ಕರ್ನಾಟಕ ಕಾಂಗ್ರೆಸ್‌ನದ್ದು 10 ಪರ್ಸೆಂಟ್‌ ಸರ್ಕಾರ ಎಂಬ ಆರೋಪವನ್ನು ಮತ್ತೆ ಮುಂದುವರಿಸಿದ ಮೋದಿ, ಕರ್ನಾಟಕ ಸರ್ಕಾರಕ್ಕೆ 10 ಪರ್ಸೆಂಟ್‌ ಕಮಿಷನ್ ನೀಡದಿದ್ದರೆ ಯಾವುದೇ ಕೆಲಸ ಆಗೋದಿಲ್ಲ. ಈ ವಿಷಯ ಪ್ರತಿಯೊಬ್ಬ ಕನ್ನಡಿಗನಿಗೂ ತಿಳಿದಿದೆ ಎಂದರು.

ಕರ್ನಾಟಕದಲ್ಲಿ 10, 12, 15, 20 ಪರ್ಸೆಂಟ್‌ ವ್ಯವಹಾರ ನಡೆಯುತ್ತಲೇ ಇದೆ ಎಂದು ಮೋದಿ ಮತ್ತೊಮ್ಮೆ ಕಟಕಿಯಾಡಿ ರಾಜ್ಯ ಸರ್ಕಾರವನ್ನು ಕೆಣಕಿದರು.

ಭಾಷಣಕ್ಕೂ ಮೊದಲು ನರೇಂದ್ರ ಮೋದಿ ಅವರು ರೈತನಾಯಕ ಯಡಿಯೂರಪ್ಪ ಅವರಿಗೆ ಮರದ ನೇಗಿಲನ್ನು ನೀಡಿ ಜನ್ಮದಿನದ ಶುಭಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.