ಕಲಬುರ್ಗಿ: ನಮ್ಮ ಸರ್ಕಾರದ ಅವಧಿಯಲ್ಲಿ ಬಳ್ಳಾರಿ ಗಣಿಧಣಿಗಳನ್ನು ಜೈಲಿಗೆ ಕಳುಹಿದ್ದೆವು. ಆದರೆ, ಮೋದಿ ಅವರೆಲ್ಲರೂ ಹೊರಬರಲು ನೆರವಾದರು. ಇಷ್ಟೇ ಅಲ್ಲ ಅವರನ್ನು ವಿಧಾನಸೌಧ ಪ್ರವೇಶಿಸಲು ಪಣ ತೊಟ್ಟಿದ್ದಾರೆ. ರಾಜ್ಯದ ಜನತೆ ಗಣಿಧಣಿಗಳ ವಿಧಾನಸಭೆ ಪ್ರವೇಶಕ್ಕೆ ತಡೆವೊಡ್ಡಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಕಲಬುರ್ಗಿ ಜಿಲ್ಲೆಯ ಕಾಳಗಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಮೋದಿ ಇಲ್ಲಿಗೆ ಬಂದು ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ. ಆದರೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ, ರೆಡ್ಡಿಗಳಂತಹ ಕಡು ಭ್ರಷ್ಟರನ್ನು ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ. ಎಂಟು ಜನ ರೆಡ್ಡಿ ಬಂಟರಿಗೆ ಟಿಕೆಟ್ ಕೊಡಲಾಗಿದೆ. ಹೀಗಾಗಿ ಮೋದಿಗೆ ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಜರಿದರು.
2019 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಅಧಿಕಾರಕ್ಕೆ ಬಂದ 10 ದಿನದ ಒಳಗೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದರು.
ಕಾಂಗ್ರೆಸ್ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಮೋದಿ ಹೇಳುತ್ತಾರೆ. ಆದರೆ ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದರೆ ಬಾಯಿ ಬಿಡುವುದಿಲ್ಲ. ಬೇಟಿ ಬಚಾವೋ ಬೇಟಿ ಪಡಾವೋ ಘೋಷಣೆ ಈಗ ಬದಲಾಗಿದ್ದು, ‘ಬೇಟಿ ಬಚಾವೋ ಬಿಜೆಪಿ ಶಾಸಕಸೆ’ ಎಂದಾಗಿದೆ ಎಂದು ವ್ಯಂಗ್ಯವಾಡಿದರು.
ಮೋದಿಗೆ ಹೇಳಿಕೊಳ್ಳಲು ಏನೂ ಇಲ್ಲ. ಹೀಗಾಗಿ ನನ್ನ ಬಗ್ಗೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ವೈಯಕ್ತಿಕವಾಗಿ ದಾಳಿ ಮಾಡುತ್ತಿದ್ದಾರೆ. ಆದರೆ ನಾನು ಅವರ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡಲ್ಲ. ಆದರೆ, ನಾಲ್ಕು ವರ್ಷಗಳ ಅವಧಿಯಲ್ಲಿ ಅವರ ಸಾಧನೆ ಏನು ಎಂದು ನಿರಂತರವಾಗಿ ಪ್ರಶ್ನಿಸುತ್ತೇನೆ. ಮೋದಿಗೆ ಯಾವ ಕಾರಣಕ್ಕೂ ಹೆದರುವುದಿಲ್ಲ ಎಂದು ಗುಡುಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.