ADVERTISEMENT

ಚಾನೆಲ್ ಮುಚ್ಚಿಸುತ್ತೇನೆ; ವರದಿಗಾರನಿಗೆ ಹೆದರಿಸಿದ ಉಪವಿಭಾಗಾಧಿಕಾರಿ

​ಪ್ರಜಾವಾಣಿ ವಾರ್ತೆ
Published 12 ಮೇ 2018, 14:01 IST
Last Updated 12 ಮೇ 2018, 14:01 IST
ಚಾನೆಲ್ ಮುಚ್ಚಿಸುತ್ತೇನೆ; ವರದಿಗಾರನಿಗೆ ಹೆದರಿಸಿದ ಉಪವಿಭಾಗಾಧಿಕಾರಿ
ಚಾನೆಲ್ ಮುಚ್ಚಿಸುತ್ತೇನೆ; ವರದಿಗಾರನಿಗೆ ಹೆದರಿಸಿದ ಉಪವಿಭಾಗಾಧಿಕಾರಿ   

ಹೊಸಪೇಟೆ: ಉಪವಿಭಾಗಾಧಿಕಾರಿ ಗಾರ್ಗಿ ಜೈನ್‌ ಅವರು ಶನಿವಾರ ಸಂಜೆ ಇಲ್ಲಿನ ಮತಗಟ್ಟೆ ಬಳಿ ‘ಪ್ರಜಾ’ ಟಿ.ವಿ. ವರದಿಗಾರ ಸುಭಾನಿ ಹಿರೇಕೊಳಚಿ ಅವರಿಗೆ ಚಾನೆಲ್‌ ಮುಚ್ಚಿಸುವ ಬೆದರಿಕೆ ಹಾಕಿದ್ದಾರೆ.

ಸಂಜೆ ಆರು ಗಂಟೆ ಸುಮಾರಿಗೆ ಇಲ್ಲಿನ ವಿವೇಕಾನಂದ ಶಾಲೆಯ ಮತಗಟ್ಟೆ ಸಂಖ್ಯೆ ಐದರಲ್ಲಿ ಹಕ್ಕು ಚಲಾಯಿಸಲು ಇನ್ನೂರರಿಂದ ಮುನ್ನೂರು ಜನ ಒಟ್ಟಿಗೆ ಬಂದಿದ್ದರು. ಮತಗಟ್ಟೆಯ ಹೊರಗೂ ಜನ ಸೇರಿದ್ದರು. ವಿಷಯ ತಿಳಿಯುತ್ತಿದ್ದಂತೆ ಗಾರ್ಗಿ ಜೈನ್‌ ಅವರು ಸ್ಥಳಕ್ಕೆ ಧಾವಿಸಿ, ಅಲ್ಲಿದ್ದವರನ್ನು ಲಾಠಿಯಿಂದ ಚದುರಿಸಿದರು. ಈ ವೇಳೆ ಅಲ್ಲಿಯೇ ಇದ್ದ ಸುಭಾನಿ ಅವರು ಅದನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ. ಅದನ್ನು ಗಮನಿಸಿದ ಜೈನ್‌ ಅವರು, ಸುಭಾನಿ ಅವರನ್ನು ಕರೆದು, ‘ಆ ವಿಡಿಯೊ ಅಳಿಸಿ ಹಾಕಬೇಕು. ಇಲ್ಲವಾದಲ್ಲಿ ನಿಮ್ಮ ಚಾನೆಲ್‌ ಮುಚ್ಚಿಸುತ್ತೇನೆ’ ಎಂದು ಹೆದರಿಸಿದ್ದಾರೆ. ಈ ವೇಳೆ ಸುಭಾನಿ ಅವರು ಏನನ್ನೂ ಪ್ರತಿಕ್ರಿಯಿಸದೇ ಅಲ್ಲಿಂದ ಮೌನವಾಗಿ ತೆರಳಿದ್ದಾರೆ.

ಈ ಕುರಿತು ಸುಭಾನಿ ಅವರನ್ನು ಸಂಪರ್ಕಿಸಿದಾಗ, ‘ಈ ವಿಷಯವನ್ನು ಪತ್ರಕರ್ತರ ಸಂಘದಲ್ಲಿ ಚರ್ಚಿಸಿದ ನಂತರ ಮುಂದೆ ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸುತ್ತೇನೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.