ಬೆಂಗಳೂರು: ‘ಕರ್ನಾಟಕದಲ್ಲಿ ಗೆಲ್ಲಲು ಬಿಜೆಪಿ ಡಬಲ್ ಗೇಮ್ ಆಡುತ್ತಿದೆ. ಯಡಿಯೂರಪ್ಪ ಅವರನ್ನು ಕೇವಲ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಗೆದ್ದ ಮೇಲೆ ಅವರಿಗೆ ಮುಖ್ಯಮಂತ್ರಿ ಇರಲಿ, ಮಂತ್ರಿ ಸ್ಥಾನವನ್ನಾದರೂ ಕೊಡುತ್ತಾರೆಯೇ ಎನ್ನುವ ಸಂಶಯ ಇದೆ’ ಎಂದು ಬಸವ ಧರ್ಮ ಪೀಠದ ಮಾತೆ ಮಹಾದೇವಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಬಿಜೆಪಿಗೆ ಪಕ್ಷನಿಷ್ಠೆ ತೋರಿದ ಯಡಿಯೂರಪ್ಪ ಅವರ ಮಗನಿಗೆ ಟಿಕೆಟ್ ಕೊಡಲಿಲ್ಲ. ಪಕ್ಷಕ್ಕಾಗಿ ಅವರು ಬೇಸರ ತೋರಿಸಿಕೊಳ್ಳದೇ ಇರಬಹುದು. ಆದರೆ ಇದು ಲಿಂಗಾಯತ ಸಮುದಾಯಕ್ಕೆ ಮಾಡಿದ ಅವಮಾನ’ ಎಂದರು.
‘ಚುನಾವಣಾ ಪ್ರಚಾರಕ್ಕೆಂದು ಬಂದಿರುವ ಮೋದಿ, ಕಾಂಗ್ರೆಸ್ ಜಾತಿ ವಿಭಜಿಸುತ್ತಿದೆ ಎಂದು ಸುಳ್ಳು ಹೇಳಿ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಒಪ್ಪಿರುವುದಲ್ಲದೆ ಅಲ್ಪಸಂಖ್ಯಾತರು ಎನ್ನುವ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಈಗ 99 ಒಳಪಂಗಡಗಳ ಜನರು ಒಂದಾಗಿದ್ದಾರೆ’ ಎಂದರು.
‘ತಾನು ಹುಟ್ಟಿ ಬೆಳೆದ ಧರ್ಮದ ಪರವಾಗಿ ಎಂ.ಬಿ.ಪಾಟೀಲ ನಿಂತರು, ಕಾಂಗ್ರೆಸ್ ಕೂಡ ಬೆಂಬಲಿಸಿದೆ. ಹೀಗಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುತ್ತೇವೆ’ ಎಂದರು.
* ನಮಗೆ ಹಿಡಿದಿರುವುದು ರಾಜಕೀಯ ಹುಚ್ಚಲ್ಲ ಬದಲಾಗಿ ಧರ್ಮದ ಹುಚ್ಚು. ಬೌದ್ಧ, ಜೈನ, ಸಿಖ್ ಧರ್ಮಕ್ಕೆ ಮಾನ್ಯತೆ ಸಿಕ್ಕಿದಂತೆ ಲಿಂಗಾಯತ ಧರ್ಮಕ್ಕೂ ಸಿಗಬೇಕು ಎಂದು ಮಾತೆ ಮಹಾದೇವಿ ಪ್ರತಿಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.