ಬೆಂಗಳೂರು: ಶಾಂತಿಯುತ ಮತದಾನಕ್ಕೆ ಸಹಕರಿಸಿದ ರಾಜ್ಯದ ಜನತೆಗೆ ಧನ್ಯವಾದಗಳು. ನಿನ್ನೆ ಸಂಜೆಯಿಂದ ನಾವು ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಮತಗಟ್ಟೆ ಸಮೀಕ್ಷೆಯನ್ನು ನೋಡುತ್ತಿದ್ದೇವೆ. ಈ ಚುನಾವಣೆಯಲ್ಲಿ ಯಾವ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಪ್ರಾದೇಶಿಕ ಪಕ್ಷವಾದ ಜೆಡಿಎಸ್ಗೆ 25-30 ಸ್ಥಾನ ಸಿಗಲಿದೆ ಎಂದು ಹೇಳುತ್ತಿದ್ದಾರೆ.
ಅಂದಹಾಗೆ ಯಾವೆಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುತ್ತದೆ ಎಂದು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿರುವ ಸುದ್ದಿವಾಹಿನಿಗಳಲ್ಲಿ ನನ್ನ ಒಂದೇ ಒಂದು ವಿನಂತಿ ಏನೆಂದರೆ, ಜೆಡಿಎಸ್ ಗೆಲ್ಲುವ ಕ್ಷೇತ್ರಗಳ ಹೆಸರು ಬಹಿರಂಗ ಪಡಿಸಿ. 25-30 ಕಡಿಮೆ ಸಂಖ್ಯೆ ಆಗಿರುವುದರಿಂದ ಆ ಕ್ಷೇತ್ರಗಳ ಹೆಸರುಗಳನ್ನು ಹೇಳುವುದಕ್ಕೆ ಮಾಧ್ಯಮಗಳಿಗೆ ಕಷ್ಟವಾಗಲಾರದು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಅವರ ಮಾಧ್ಯಮ ಕಾರ್ಯದರ್ಶಿ ಸದಾನಂದ ಅವರು ಹೇಳಿದ್ದಾರೆ.
ಒಂದು ವೇಳೆ ಮಾಧ್ಯಮದವರು ಸಂಖ್ಯೆ ಆಟ ಆಡಿದ್ದರೆ, ಅದು ಅವರವರ ಮಾಧ್ಯಮದವರ ನಂಬರ್ ಗೇಮ್ ಎಂದೇ ಪರಿಗಣಿಸಲ್ಪಡುತ್ತದೆ.
ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಾಧ್ಯಮಗಳು ವೈಜ್ಞಾನಿಕವಾಗಿ ಮತ್ತು ತುಂಬಾ ಸುಂದರವಾಗಿ ಮತಗಟ್ಟೆ ಸಮೀಕ್ಷೆ ಮಾಡಿವೆ. ಮೇ 15ರಂದು ನಿಜ ಬಣ್ಣ ಬಯಲಾಗಲಿದೆ ಎಂದು ಸದಾನಂದ ಹೇಳಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.