ಬೆಂಗಳೂರು: ‘ನಾನು ಎರಡು ವರ್ಷ ಮುಂಚೆ ಗೃಹಸಚಿವನಾಗಿದ್ದರೆ ಭಯ ಹುಟ್ಟಿಸುವ ಫ್ಯಾಕ್ಟರಿಗಳನ್ನೆಲ್ಲಾ ಮುಚ್ಚುತ್ತಿದ್ದೆ. ಈಗಲೂ ಈ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇನೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್ತಿನಲ್ಲಿ ಬುಧವಾರ ಹೇಳಿದರು.
ಅದಕ್ಕೆ, ವಿರೋಧ ಪಕ್ಷದ ನಾಯಕ ಕೆ. ಎಸ್.ಈಶ್ವರಪ್ಪ, ‘ಕೊನೆಗೂ ನೀವು ಈ ಹಿಂದಿನ ಗೃಹ ಸಚಿವರು ನಾಲಾಯಕ್ ಎಂದು ಒಪ್ಪಿಕೊಂಡಿರಿ’ ಎಂದು ವ್ಯಂಗ್ಯವಾಡಿದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಸದಸ್ಯರ ಆರೋಪಕ್ಕೆ ಸಚಿವರು ಉತ್ತರಿಸಿದರು.‘ಹಿಂದೂಗಳ ಹತ್ಯೆಯಲ್ಲಿ ಪಿಎಫ್ಐ ಹಾಗೂ ಎಸ್ಡಿಪಿಐ ಕೈವಾಡ ಇದೆ. ಈ ಸಂಘಟನೆಯನ್ನು ನಿಷೇಧಿಸಬೇಕು ಎಂದು ಬಿಜೆಪಿಯವರು ಒತ್ತಾಯಿಸುತ್ತಿದ್ದಾರೆ. ಎರಡೂ ಕೈ ಸೇರದೇ ಚಪ್ಪಾಳೆ ಆಗದು. 13 ಮುಸ್ಲಿಮರ ಹತ್ಯೆ ಪ್ರಕರಣಗಳಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಭಾಗಿಯಾಗಿದೆ. ಈ ಕೊಲೆಗಳು ಕೂಡಾ ತಪ್ಪೇ. ಪಿಎಫ್ಐ, ಎಸ್ಡಿಪಿಐ ನಿಷೇಧಿಸಿದರೆ, ಸಂಘಪರಿವಾರವನ್ನೂ ನಿಷೇಧಿಸಬೇಕಾಗುತ್ತದೆ’ ಎಂದರು.
‘ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಪಿಎಫ್ಐ ನಿಷೇಧ ಮಾಡಬಹುದಿತ್ತು. ಕಾಂಗ್ರೆಸ್ ಮತಗಳನ್ನು ಅವರು ವಿಭಜನೆ ಮಾಡುತ್ತಾರೆ ಎಂಬ ಕಾರಣಕ್ಕೆ ನಿಷೇಧಿಸಿಲ್ಲ’ ಎಂದು ರೆಡ್ಡಿ ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.