ADVERTISEMENT

ದೇವೇಗೌಡರಿಂದ ₹10 ಲಕ್ಷ ಸಾಲ ಮಾಹಿತಿ: ಪ್ರಜ್ವಲ್‌ಗೆ ಚುನಾವಣಾಧಿಕಾರಿ ನೋಟಿಸ್‌

ರಾಜ್ಯದಲ್ಲಿ ತುರ್ತು ಪರಿಸ್ಥಿತಿ ವಾತಾವರಣ: ರೇವಣ್ಣ ಕಿಡಿ

​ಪ್ರಜಾವಾಣಿ ವಾರ್ತೆ
Published 2 ಮೇ 2019, 15:45 IST
Last Updated 2 ಮೇ 2019, 15:45 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ಕೇಂದ್ರ ಸರ್ಕಾರ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ವಾತಾವರಣ ನಿರ್ಮಿಸಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.

‘ರಾಜಕೀಯ ದುರುದ್ದೇಶಕ್ಕೆ ಐಟಿ ದಾಳಿ ಹಾಗೂ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಚುನಾವಣಾಧಿಕಾರಿ ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣಗೆ ನೋಟಿಸ್ ನೀಡುತ್ತಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಒಮ್ಮೆ ನಾಮಪತ್ರ ಅಂಗೀಕಾರವಾದ ನಂತರ ಅದನ್ನು ಪ್ರಶ್ನೆ ಮಾಡಲು ಆಗುವುದಿಲ್ಲ. ಏನಿದ್ದರೂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನನ್ನ ಮಗ ದೇವೇಗೌಡ ಎಂಬುವರ ಬಳಿ ₹ 10 ಲಕ್ಷ ಸಾಲ ಪಡೆದಿದ್ದಾನೆ. ಅದರಲ್ಲಿ ಎಚ್.ಡಿ.ದೇವೇಗೌಡ ಅಂತ ಇದಿಯಾ. ಆದರೂ ಜಿಲ್ಲಾಧಿಕಾರಿ ಸ್ಪಷ್ಟನೆ ಕೇಳಿ ಮಗನಿಗೆ ನೋಟಿಸ್‌ ನೀಡಿದ್ದಾರೆ. ಬಿಜೆಪಿ ಪಕ್ಷದ ಪರವಾಗಿ ಜಿಲ್ಲಾಧಿಕಾರಿ ಕೆಲಸ ಮಾಡಬಾರದು. ನಾವು ಚುನಾವಣೆ ಮಾಡಬೇಕೋ, ಬೆಳಿಗ್ಗೆಯಾದರೆ ನೋಟಿಸ್‌ಗೆ ಉತ್ತರ ಕೊಡಲು ಓಡಾಡಬೇಕೋ’ ಎಂದು ಪ್ರಶ್ನಿಸಿದರು.

ADVERTISEMENT

‘ಹರದನಹಳ್ಳಿ ಈಶ್ವರ ದೇಗುಲದ ಅರ್ಚಕರ ಮನೆ ಮೇಲೆ ಐಟಿ ದಾಳಿ ನಡೆದಿರುವುದು ಸತ್ಯ. ಹಾಸನ ಹಾಲು ಒಕ್ಕೂಟದಲ್ಲಿರುವ ಗುಮಾಸ್ತ ಬೋರೇಗೌಡನ ಮೇನೆ ಮೇಲೂ ಐಟಿ ದಾಳಿ ನಡೆದಿದ್ದು, ಅವರಿಗೆ ₹ 10 ಸಿಕ್ಕಿದೆ. ಬಿಜೆಪಿ ನಾಯಕರ ಬಳಿ ಹಣ ಇದ್ದರೂ ದಾಳಿ ಮಾಡುವುದಿಲ್ಲ’ ಎಂದು ಹೇಳಿದರು.

‘ಮುಖ್ಯಮಂತ್ರಿ ಸೇರಿ ಎಲ್ಲರ ಬಗ್ಗೆ ನಾಲಗೆ ಹರಿಯ ಬಿಡುತ್ತಿರುವ ಈಶ್ವರಪ್ಪ ವಿರುದ್ಧ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು. ನಿಖಿಲ್‌ ಕುಟುಂಬದ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವರು ಮೊಬೈಲ್‌ ಸಂಭಾಷಣೆ ರೆಕಾರ್ಡ್‌ ಮಾಡಿ, ಪಕ್ಷದ ತೇಜೋವಧೆ ಮಾಡುತ್ತಿದ್ದಾರೆ. ಇಂತಹುದಕ್ಕೆಲ್ಲಾ ಚುನಾವಣಾ ಆಯೋಗ ಬ್ರೇಕ್‌ ಹಾಕಬೇಕು’ ಎಂದು ಒತ್ತಾಯಿಸಿದರು.

‘ನಮ್ಮ ಕುಟುಂಬದ ಯಾರೂ ಪರ್ಸೆಂಟೇಜ್‌ ತೆಗೆದುಕೊಳ್ಳುವ ಪಾಪದ ಕೆಲಸಕ್ಕೆ ಕೈ ಹಾಕಿಲ್ಲ. ಪರ್ಸೆಂಟೆಜ್‌ ತೆಗೆದುಕೊಳ್ಳುವವರು ಬಿಜೆಪಿಯವರು. ಜೈಲಿಗೆ ಹೋಗಿ ಬಂದವರ ಪರ ಪ್ರಧಾನಿ ನರೇಂದ್ರ ಪ್ರಚಾರ ಮಾಡುತ್ತಿದ್ದಾರೆ’ ಎಂದು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.