ADVERTISEMENT

ಗೋಡ್ಸೆ ಸಂತತಿ ಬೆಂಬಲಿಸಬೇಡಿ: ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್‌

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 11:00 IST
Last Updated 16 ಏಪ್ರಿಲ್ 2019, 11:00 IST
ಪ್ರೊ.ರವಿವರ್ಮಕುಮಾರ್‌
ಪ್ರೊ.ರವಿವರ್ಮಕುಮಾರ್‌   

ಚಿತ್ರದುರ್ಗ: ಪ್ರಜಾಪ್ರಭುತ್ವಕ್ಕೆ ದಾರಿದೀಪ ಆಗಬೇಕಿದ್ದ ಚುನಾವಣೆ ದಿಕ್ಕುತಪ್ಪುತ್ತಿದೆ. ದೇಶದಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಉಳಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವ ಅಗತ್ಯವಿದೆ ಎಂದು ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್‌ ಅಭಿಪ್ರಾಯಪಟ್ಟರು.

‘ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿ ಹುದ್ದೆಗೆ ಏರಿದರೆ ದೇಶಕ್ಕೆ ಅಪಾಯ ಉಂಟಾಗುತ್ತದೆ. ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಪ್ರತಿಯೊಬ್ಬ ಮತದಾರರು ಪ್ರಜ್ಞಾಪೂರ್ವಕವಾಗಿ ಮತಚಲಾವಣೆ ಮಾಡಬೇಕು’ ಎಂದು ಮನವಿ ಮಾಡಿದರು.

‘ಸಂವಿಧಾನವನ್ನು ಆರ್‌ಎಸ್ಎಸ್‌ ಬಹುವರ್ಷಗಳಿಂದ ವಿರೋಧಿಸುತ್ತಿದೆ. ಇದು ಆರ್‌ಎಸ್‌ಎಸ್‌ ಹಾಗೂ ಸಂವಿಧಾನ, ಸರ್ವಾಧಿಕಾರಿ ಮತ್ತು ಪ್ರಜಾಪ್ರಭುತ್ವದ ನಡುವೆ ನಡೆಯುತ್ತಿರುವ ಚುನಾವಣೆ. ದೇಶಕ್ಕೆ ಖಾದಿ ನೀಡಿದ ಚಿತ್ರದುರ್ಗದ ಮತದಾರರು ಗೋಡ್ಸೆ ಸಂತತಿಯನ್ನು ಬೆಂಬಲಿಸಬಾರದು’ ಎಂದರು.

ADVERTISEMENT

‘ಪ್ರಜಾಪ್ರಭುತ್ವದಲ್ಲಿ ಧರ್ಮ ಬೆರೆಸಬಾರದು ಎಂಬುದು ಅಂಬೇಡ್ಕರ್‌ ಆಶಯ. ಆದರೆ, ರಾಜಕಾರಣದಲ್ಲಿ ಧರ್ಮ ಬೆರೆಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಧಾರ್ಮಿಕ ವಿಚಾರ ಕೆರಳಿಸುವ ಅಂಶಗಳಿವೆ’ ಎಂದು ಆರೋಪಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಗೌರವವಿಲ್ಲ. ಸಂಸತ್ತಿನ ಅಧಿವೇಶನ ಆರಂಭವಾಗುತ್ತಿದ್ದಂತೆ ವಿದೇಶಕ್ಕೆ ಪ್ರಯಾಣ ಬೆಳೆಸುತ್ತಾರೆ. ಲೋಕಸಭೆಯ ಯಾವೊಬ್ಬ ಸದಸ್ಯರ ಪ್ರಶ್ನೆಗೂ ಉತ್ತರ ನೀಡಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.