ಹೈಲಾಕಾಂಡೀ (ಅಸ್ಸಾಂ): ‘ಪ್ರಮುಖ ವಿರೋಧ ಪಕ್ಷದ ನಾಯಕನ ಜೊತೆ ನೇರಾನೇರ ಚರ್ಚೆ ನಡೆಸಲು ಹಿಂಜರಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಒಬ್ಬ ಕಳ್ಳ ಮತ್ತು ಹೇಡಿ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದರು.
ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರದ ಬಗ್ಗೆ ನನ್ನ ಜೊತೆ ಚರ್ಚೆಗೆ ಬಾ ಎಂದು ಚೌಕೀದಾರನನ್ನು ಆಹ್ವಾನಿಸಿದ್ದೆ. ಆದರೆ ನನ್ನನ್ನು ಎದುರಿಸುವ ಧೈರ್ಯವಿಲ್ಲದೆ ಆತ ಓಡಿ ಹೋಗಿದ್ದಾನೆ. ಚೌಕೀದಾರ ಕಳ್ಳನಷ್ಟೇ ಅಲ್ಲ ಹೇಡಿಯೂ ಹೌದು’ ಎಂದರು.
‘ಅವರು ಚರ್ಚೆಗೆ ಬಂದರೆ, ರಫೇಲ್ ವಿಮಾನದ ಬೆಲೆ ₹ 526 ಕೋಟಿಯಿಂದ ₹ 1,600 ಕೋಟಿಗೆ ಏರಿಕೆ ಆಗಿದ್ದೇಕೆ, ₹ 30 ಸಾವಿರ ಕೋಟಿಯನ್ನು ಅನಿಲ್ ಅಂಬಾನಿಗೆ ಕೊಟ್ಟಿದ್ದೇಕೆ ಎಂದು ನಾನು ಪ್ರಶ್ನಿಸುತ್ತೇನೆ. ಅದಕ್ಕಾಗಿಯೇ ಅವರು ಓಡಿಹೋಗುತ್ತಿದ್ದಾರೆ’ ಎಂದು ರಾಹುಲ್ ಟೀಕಿಸಿದರು.
‘ಮೋದಿ ಸರ್ಕಾರ ದೇಶದ 15 ಶ್ರೀಮಂತರಿಗೆ ಮಾತ್ರ ಹಣ ಕೊಟ್ಟಿದೆ. ಮಾಧ್ಯಮಗಳಲ್ಲಿ ಆ ಸುದ್ದಿಯೇ ಬರುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಡವರಿಗೆ ಹಣ ಸಂದಾಯವಾಗುವ ಸುದ್ದಿಗಳು ಮಾತ್ರ ಬರಲಿವೆ. ನಾವು ಅಧಿಕಾರಕ್ಕೆ ಬಂದರೆ ಹಣದ ತಿಜೋರಿಯ ಕೀಲಿಯನ್ನು ಅನಿಲ್ ಅಂಬಾನಿ ಕೈಯಿಂದ ಕಸಿದುಕೊಂಡು ಯುವಕರ ಕೈಗೆ ಕೊಡುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.