ಮುಂಬೈ: ‘ಮಹಾರಾಷ್ಟ್ರ ನವನಿರ್ಮಾಣ ಸೇನಾದ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ, ಮದುವೆ ಮನೆಯಲ್ಲಿ ನೃತ್ಯ ಮಾಡುವ ವ್ಯಕ್ತಿ’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಟೀಕಿಸಿದ್ದಾರೆ.
ಶುಕ್ರವಾರ ರ್ಯಾಲಿಯೊಂದರಲ್ಲಿ ಫಡಣವಿಸ್ ಹಾಗೂ ಮೋದಿ ಅವರನ್ನು ಟೀಕಿಸಿದ್ದ ರಾಜ್ ಠಾಕ್ರೆ, ‘ಮಹಾರಾಷ್ಟ್ರದ ಜನರು ನೀರಿಲ್ಲದೆ ತತ್ತರಿಸುತ್ತಿದ್ದರೆ, ಫಡಣವಿಸ್ ಅವರು ಗೋದಾವರಿ ನದಿಯ ನೀರನ್ನು ಗುಜರಾತ್ಗೆ ಹರಿಸಿದ್ದಾರೆ. ಅವರೊಬ್ಬ ಸ್ಥಾಪಿತ ಮುಖ್ಯಮಂತ್ರಿ’ ಎಂದು ಟೀಕಿಸಿದ್ದರು.
ಶನಿವಾರ ಇದಕ್ಕೆ ಪ್ರತ್ಯುತ್ತರ ನೀಡಿದ ಫಡಣವಿಸ್, ‘ರಾಜ್ ಠಾಕ್ರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಆದ್ದರಿಂದ ಬೇಕುಬೇಕಾದಂತೆ ಆಧಾರರಹಿತ ಟೀಕೆಗಳನ್ನು ಮಾಡಬಹುದು. ‘ಸ್ಥಾಪಿತ ಮುಖ್ಯಮಂತ್ರಿ’ ಎಂದು ನನ್ನನ್ನು ಟೀಕಿಸಿದ್ದಾರೆ. ನಿಜ, ನಾನು ರಾಜ್ಯದ ಜನರಿಂದ ಸ್ಥಾಪನೆಗೊಂಡಿರುವ ಮುಖ್ಯಮಂತ್ರಿ. ರಾಜ್ ಅವರನ್ನು ರಾಜ್ಯದ ಜನರು ಮೂಲೆಗುಂಪು ಮಾಡಿದ್ದರಿಂದ ಅವರು ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.