ಹುಬ್ಬಳ್ಳಿ: ಫೇಸ್ಬುಕ್ ಪ್ರೊಫೈಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ‘ಮೈ ಭಿ ಚೌಕಿದಾರ್’ ಎಂದು ಬರೆದುಕೊಂಡಿದ್ದ ಇಲ್ಲಿಯ ರೈಲ್ವೆ ಸುರಕ್ಷಾ ಬಲದ (ಆರ್ಪಿಎಫ್) ಶಸ್ತ್ರಾಗಾರದ ಎಎಸ್ಐ ಲಕ್ಷ್ಮಣ ಪಾಟೀಲ ಅವರಿಗೆ ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ನೋಟಿಸ್ ಜಾರಿಗೊಳಿಸಿದ್ದಾರೆ.
ಮೂಲತಃ ಬೆಳಗಾವಿಯವರಾದ ಲಕ್ಷ್ಮಣ ಅವರು ನಗರದ ಆರ್ಪಿಎಫ್ ಘಟಕದಲ್ಲಿ ಎಎಸ್ಐ ಆಗಿದ್ದಾರೆ. ತಮ್ಮ ಫೇಸ್ಬುಕ್ ಖಾತೆಗೆ ಬಳಸಿದ ಪ್ರೊಫೈಲ್ ಫೋಟೊ ಮೇಲೆ ಇಂಗ್ಲಿಷ್ನಲ್ಲಿ ಮೈ ಭಿ ಚೌಕಿದಾರ್ ಎಂದು ಬರೆದಿದ್ದರು. ಹೆಸರಿನ ಮುಂದೆಯೂ ಚೌಕಿದಾರ್ ಬರೆದಿದ್ದರು.
ಈ ವಿಚಾರ ಚುನಾವಣಾಧಿಕಾರಿಗಳ ಗಮನಕ್ಕೆ ಬಂದಿದೆ ಎಂಬುದನ್ನು ಅರಿತ ಲಕ್ಷ್ಮಣ ಪಾಟೀಲ ತಕ್ಷಣ ಪ್ರೊಫೈಲ್ ಚಿತ್ರವನ್ನು ಅಳಿಸಿದರು. ಆದರೆ, ಹೆಸರಿನ ಮುಂದೆ ಚೌಕಿದಾರ ಹಾಗೆಯೇ ಉಳಿದಿತ್ತು.
ಇತ್ತೀಚೆಗೆ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು ತಮ್ಮ ಸಂಪುಟ ಸಹೋದ್ಯೋಗಿಗಳು ಹಾಗೂ ಸಂಸದರು, ಶಾಸಕರ ಟ್ವಿಟ್ಟರ್, ಫೇಸ್ಬುಕ್ ಖಾತೆಗಳಲ್ಲಿ ‘ಚೌಕಿದಾರ್’ ಎಂದು ಸೇರಿಸಿಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಬಹುತೇಕ ಸಚಿವರು ಚೌಕಿದಾರ್ ಎಂದು ಸೇರಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.