‘ನಾವೆಲ್ಲ ಸಾಮಾನ್ಯರು. ಕಷ್ಟಪಟ್ಟು ಕೆಲಸ ಮಾಡಬೇಕು ಅನ್ನೋ ಹಂಬಲವುಳ್ಳವರು. ನಮ್ಮ ನಿರ್ಮಾಪಕರು ಶ್ರೀಮಂತ ನಿರ್ಮಾಪಕರೇನಲ್ಲ. ಟಿಕೇಟ್ ತಗೊಂಡು ನೋಡಿ. ನಮ್ಮೆಲ್ಲರಿಗೆ ತುತ್ತು ಅನ್ನ ಹಾಕಿ’ ಹೀಗೆ ನೇರವಾಗಿ ಮಾತು ಆರಂಭಿಸಿದವರು ‘ಶ್ರಾವಣ’ದ ನಿರ್ಮಾಪಕ ರಾಜಶೇಖರ್.
‘ಚಿತ್ರದ ಕೆಲಸ ಶುರುವಾಗಿ ಒಂದು ವರ್ಷ ಆಯಿತು. ಇಪ್ಪತ್ತೇಳು ದಿನಗಳಲ್ಲಿ ಶೂಟಿಂಗ್ ಮುಗಿಯಿತು. ಆದರೆ ಅಧಿಕ ಮಾಸದಿಂದಾಗಿ ಬಿಡುಗಡೆ ಮಾಡಲಿಕ್ಕಾಗಿರಲಿಲ್ಲ. ಆಷಾಢ ದುಃಖ, ದುಗುಡಕ್ಕೆ ಸಂಕೇತವಾದರೆ ಶ್ರಾವಣ ಸಂಭ್ರಮಕ್ಕೆ ಸಾಕ್ಷಿಯಾಗುತ್ತದೆ.
ಈ ಎಳೆಯ ಮೇಲೆ ನಮ್ಮ ಚಿತ್ರ ಸಾಗುತ್ತದೆ. ನಾಯಕ ನಟ ವಿಜಯ್ ರಾಘವೇಂದ್ರ ಚೆನ್ನಾಗಿ ಅಭಿನಯಿಸಿದ್ದಾರೆ. ಸೀತಾಪತಿ ಕಥೆ ಬರೆದಿದ್ದಾರೆ. ಕಾರ್ತಿಕ್ ಭೂಪತಿ ಸಂಗೀತ ನೀಡಿದ್ದಾರೆ. ಕೆ. ವಾಸುದೇವನ್ ಅವರ ಛಾಯಾಗ್ರಹಣ, ಹರಿಕಿಶೋರ್ ಸಂಭಾಷಣೆ, ದೊಡ್ಡರಂಗೇಗೌಡ ಅವರ ಸಾಹಿತ್ಯವಿದೆ’ ಎಂದಷ್ಟೇ ಹೇಳಿದರು.
ನಟ ಭುವನಚಂದ್ರ, ‘ಸಿರಿವಂತ’ ನನಗೆ ಮೊದಲ ಸಿನಿಮಾ. ‘ಶ್ರಾವಣ’ದಲ್ಲಿ ವಿಜಯ್ ರಾಘವೇಂದ್ರ, ಸಂದೀಪ್ ಮತ್ತು ನಾನು, ಮೂವರೂ ನಿರುದ್ಯೋಗಿಗಳು. ನಮಗಿಂತಲೂ ನಾವು ಪ್ರೀತಿಸದವರು ಮುಖ್ಯ. ಅವರಿಗಾಗಿ ನಾವೇನು ಮಾಡ್ತೇವೆ ಅನ್ನೋದು ಈ ಚಿತ್ರದಲ್ಲಿದೆ’ ಅಂದರು.
ನಟ ಸಂದೀಪ್, ‘ಕರುಳಿನ ಕೂಗು’ ಚಿತ್ರದಲ್ಲಿ ಬಾಟಲನಟನಾಗಿ ಅಭಿನಯಿಸಿದ್ದೆ. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಮತ್ತು ಭುವನಚಂದ್ರ ಅವರದು ಗಂಭಿರ ಪಾತ್ರಗಳಾದರೆ ನನ್ನದು ಒಂಥರಾ ಆರಾಮ್ ಮತ್ತು ಕಾಮಿಡಿ ಕ್ಯಾರೆಕ್ಟರ್’ ಅಂತ ಹೇಳ್ತಾ ನಾಯಕಿ ಗಾಯಿತ್ರಿಗೆ ಮೈಕ್ ವರ್ಗಾಯಿಸಿದರು.
‘ನಾನು ಮುಂಬೈನವಳು. ಮಾಡೆಲಿಂಗ್ನಿಂದ ಈಗ ಸಿನಿಮಾಗೆ ಬಂದಿದ್ದೀನಿ. ತೆಲುಗಿನಲ್ಲಿ ಒಂದು ಚಿತ್ರ ಮಾಡಿದ್ದೀನಿ.ಕನ್ನಡದಲ್ಲಿ ನನಗೆ ಇದು ಮೊದಲ ಚಿತ್ರ’ ಎಂದ ಗಾಯಿತ್ರಿ ಮಾತಿನ ವಿಷಯದಲ್ಲಿ ಜುಗ್ಗಿಯಾದದ್ದಷ್ಟೇ ಅಲ್ಲ, ಕ್ಯಾಮೆರಾ ಕಣ್ಣು ಎದುರಾದಾಗಲೆಲ್ಲಾ ಅವರ ಮುಖದಲ್ಲಿ ಸಂಕಟದ ಭಾವ. ನಿರ್ಮಾಪಕರಲ್ಲೊಬ್ಬರಾದ ಮಲ್ಲಿಕಾರ್ಜುನಯ್ಯ, ನಟಿ ಅಪೂರ್ವ ಅಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.