ADVERTISEMENT

ಚಿತ್ರೋತ್ಸವ ಮುಗಿಯಿತು, ‘ಸಿನಿಮಾ ದಿನ’ ಮರೆಯಿತು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 15:23 IST
Last Updated 4 ಮಾರ್ಚ್ 2018, 15:23 IST
ಚಿತ್ರ ನಿರ್ದೇಶಕ ಪಿ. ಶೇಷಾದ್ರಿ
ಚಿತ್ರ ನಿರ್ದೇಶಕ ಪಿ. ಶೇಷಾದ್ರಿ   

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ತನ್ನ ಪರಂಪರೆ ಮತ್ತು ಇತಿಹಾಸದ ಬಗ್ಗೆ ಮರೆವು ಆವರಿಸಿದೆಯೇ? ಮಾರ್ಚ್ 3ರಂದು ಆಚರಿಸಬೇಕಿದ್ದ 'ಕರ್ನಾಟಕ ಚಲನಚಿತ್ರ ದಿನ'ದ ಮರೆವಿನ ಹಿನ್ನೆಲೆಯಲ್ಲಿ ಉಂಟಾಗಿರುವ ಪ್ರಶ್ನೆಯಿದು.

ಕಳೆದ ಐದು ವರ್ಷಗಳಿಂದಲೂ ಮಾರ್ಚ್ 3ರ ದಿನವನ್ನು ‘ಕನ್ನಡ ಚಲನಚಿತ್ರ ದಿನಾಚರಣೆ’ ರೂಪದಲ್ಲಿ ‘ಕರ್ನಾಟಕ ಚಲನಚಿತ್ರ ಅಕಾಡೆಮಿ’ ಆಚರಿಸುತ್ತಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಈ ಕಾರ್ಯಕ್ರಮಕ್ಕೆ ಕೈಜೋಡಿಸುತ್ತಿತ್ತು. ಆದರೆ, ಈ ಬಾರಿಯ ಮಾರ್ಚ್ 3ರ ಆಚರಣೆಯನ್ನು ಅಕಾಡೆಮಿಯಾಗಲೀ, ವಾಣಿಜ್ಯ ಮಂಡಳಿಯಾಗಲೀ ಸಾಂಕೇತಿಕವಾಗಿಯೂ ನೆನಪಿಸಿಕೊಳ್ಳುವ ಗೋಜಿಗೆ ಹೋಗಿಲ್ಲ.

ಕನ್ನಡ ಸಿನಿಮಾ ಇತಿಹಾಸವನ್ನು ನೆನಪಿಸಿಕೊಳ್ಳುವ ದೃಷ್ಟಿಯಿಂದ ಮಾರ್ಚ್ 3ರ ಆಚರಣೆಗೆ ವಿಶೇಷ ಮಹತ್ವವಿದೆ. ಈ ಬಾರಿ ಸಿನಿಮಾ ದಿನಾಚರಣೆಯನ್ನು ಆಚರಿಸದಿರುವುದು ವಿಷಾದದ ಸಂಗತಿ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು.

ADVERTISEMENT

ಚಲನಚಿತ್ರ ಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್‍ ಅವರಿಗೆ ‘ಸಿನಿಮಾ ದಿನ’ ಆಚರಣೆಯ ಬಗ್ಗೆ ಯಾವ ನೆನಪೂ ಇರಲಿಲ್ಲ. ‘ಸಿನಿಮಾ ದಿನ’ ಎಂದು ಆಚರಿಸುವುದಾದರೆ ಅದು ಒಳ್ಳೆಯದು. ಮುಂದಿನ ದಿನಗಳಲ್ಲಿ ನಿರ್ದೇಶಕರ ಸಂಘ ಕೂಡ ಈ ಬಗ್ಗೆ ಯೋಚನೆ ನಡೆಸುತ್ತದೆ ಎಂದವರು ಹೇಳಿದರು.

ಅದ್ದೂರಿಯ ನಂತರ ಮರೆವು: ‘ಸಿನಿಮಾ ದಿನಾಚರಣೆ’ ಸಂದರ್ಭದಲ್ಲಿ ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡುವ ಪರಿಪಾಠವನ್ನು ಅಕಾಡೆಮಿ 2016ರಲ್ಲಿ ಪ್ರಾರಂಭಿಸಿತ್ತು. ಮೊದಲ ವರ್ಷ 10 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರೆ, 2017ರಲ್ಲಿ 15 ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.