ADVERTISEMENT

`ದಾಸ್ವಾಳ' ಪರಿಮಳ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 19:59 IST
Last Updated 18 ಜುಲೈ 2013, 19:59 IST
ಪ್ರೇಮ್
ಪ್ರೇಮ್   

ಸುದ್ದಿಗೋಷ್ಠಿ ಪರಸ್ಪರ ಹೊಗಳಿಕೆಯ ವೇದಿಕೆಯಾಗಿ ಮಾರ್ಪಟ್ಟಿತ್ತು. ಮಾತುಗಾರರ ಸಂತೆಯೇ ನೆರೆದಿದ್ದರಿಂದ ಸಿನಿಮೇತರ ಮಾತುಗಳಿಗೂ ಕೊರತೆಯಿರಲಿಲ್ಲ. ಸಿನಿಮಾ ಶೀರ್ಷಿಕೆ ಮತ್ತು ಸಿನಿಮಾ ಭಾಷೆಗೆ ಅನುಗುಣವಾಗಿ ಎಲ್ಲರೂ ಸರದಿಯಲ್ಲಿ `ದಾಸ್ವಾಳ' ಇಡುವುದರಲ್ಲಿ ಮಗ್ನರಾಗಿದ್ದರು ಎನ್ನಬಹುದು.

`ದಾಸ್ವಾಳ' ಚಿತ್ರದ ಮೂರು ಹಾಡುಗಳ ಚಿತ್ರೀಕರಣವನ್ನು ಬಾಕಿ ಉಳಿಸಿಕೊಂಡ ಚಿತ್ರತಂಡ, ಅದುವರೆಗಿನ ಅನುಭವಗಳನ್ನು ಹಂಚಿಕೊಂಡಿತು. ಚಿತ್ರ ಅಂದುಕೊಂಡಂತೆ ಚೆನ್ನಾಗಿ ಮೂಡಿಬಂದಿದೆ ಎಂಬ ಆತ್ಮವಿಶ್ವಾಸದ ನುಡಿ ನಿರ್ದೇಶಕ ಎಂ.ಎಸ್, ರಮೇಶ್ ಅವರದ್ದು. ಆದರೆ ಚಿತ್ರೀಕರಣದ ಶುರುವಿನಿಂದಲೂ ಚಿತ್ರತಂಡದ ಮೇಲೆ ಹೆಚ್ಚು ವಿಶ್ವಾಸ ಇಟ್ಟುಕೊಂಡವರು ನಿರ್ಮಾಪಕ ಅಣಜಿ ನಾಗರಾಜ್.

ಚಿತ್ರದ ಹೊಣೆಯನ್ನು ಎಂ.ಎಸ್. ರಮೇಶ್ ಮತ್ತವರ ತಂಡದ ಸುಪರ್ದಿಗೆ ವಹಿಸಿಕೊಟ್ಟ ಅವರು ಒಂದೆರಡು ಬಾರಿ ಮಾತ್ರ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿದ್ದರಂತೆ. ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರ ಈಗಾಗಲೇ ಡಬ್ಬಿಂಗ್ ಪ್ರಾರಂಭಿಸಿದೆ.

`ದಾಸ್ವಾಳ'ದ ಎರಡು ಪ್ರಮುಖ ಪಾತ್ರಗಳೆಂದರೆ ನಾಯಕ ಮತ್ತು ನಾಯಕನ ಮಾವ. ಪ್ರೇಮ್ ಮತ್ತು ರಂಗಾಯಣ ರಘು ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಜೀವನದಲ್ಲಿ ನಾಲ್ಕು ಜನರನ್ನು ಸಂಪಾದಿಸಬೇಕು ಎಂಬು ಮಾತನ್ನು ಪದೇ ಪದೇ ಕೇಳುವ ಅವರಿಬ್ಬರೂ ಆ ನಾಲ್ವರು ಯಾರೆಂದು ಹುಡುಕುತ್ತಾ ಹೋಗುತ್ತಾರೆ. ಇದು `ದಾಸ್ವಾಳ'ದ ಒಂದು ಎಳೆ. ಹಾಸ್ಯ, ಆಕ್ರೋಶ, ಭಾವುಕತೆ ಎಲ್ಲವೂ ಚಿತ್ರದಲ್ಲಿದೆ ಎಂಬ ಮಾಹಿತಿ ನೀಡಿದರು ಎಂ.ಎಸ್. ರಮೇಶ್.

ಬಾದಾಮಿಯ ಸುಂದರ ತಾಣಗಳಲ್ಲಿ ಸುಮಾರು 39 ದಿನಗಳ ಚಿತ್ರೀಕರಣ ನಡೆಸಲಾಗಿದೆ. ಯೋಜಿತ ಸಮಯಕ್ಕೆ ಸರಿಯಾಗಿ ಚಿತ್ರೀಕರಣ ಪೂರ್ಣಗೊಳಿಸಿದ ರಮೇಶ್ ಅವರ ಬದ್ಧತೆಯನ್ನು ಕಲಾವಿದರ ಬಳಕ ಕೊಂಡಾಡಿತು. ಚಿತ್ರದಲ್ಲಿ ಪುರಂದರ ದಾಸರ ಮೂರು ಕೀರ್ತನೆಗಳನ್ನು ಬಳಸಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ತಾವು ಇಷ್ಟು ಬೇಗನೆ ಹಾಡುಗಳನ್ನು ನೀಡಿದ್ದು ಎಂಬ ಸತ್ಯವನ್ನು ಒಪ್ಪಿಕೊಂಡರು ಸಂಗೀತ ನಿರ್ದೇಶಕ ಗುರುಕಿರಣ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT