ADVERTISEMENT

ಮುಖವಾಡಗಳ ಅನಾವರಣದ ‘ಅಸ್ತಿತ್ವ’

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2016, 11:45 IST
Last Updated 19 ಆಗಸ್ಟ್ 2016, 11:45 IST
ಮುಖವಾಡಗಳ ಅನಾವರಣದ ‘ಅಸ್ತಿತ್ವ’
ಮುಖವಾಡಗಳ ಅನಾವರಣದ ‘ಅಸ್ತಿತ್ವ’   

‘ಕೃಷ್ಣನ್ ಮ್ಯಾರೇಜ್ ಸ್ಟೋರಿ’ ಸಿನಿಮಾದ ಮೂಲಕ ಸಹೃದಯರ ಗಮನಸೆಳೆದಿದ್ದ ನಿರ್ದೇಶಕ ನೂತನ್ ಉಮೇಶ್ ಈಗ ‘ಅಸ್ತಿತ್ವ’ ಚಿತ್ರದ ಮೂಲಕ ಚಿತ್ರರಸಿಕರ ಗಮನಸೆಳೆಯುವ ಉತ್ಸಾಹದಲ್ಲಿದ್ದಾರೆ. ಅವರ  ನಿರ್ದೇಶನದ ಎರಡನೇ ಚಿತ್ರ ‘ಅಸ್ತಿತ್ವ’ ಇಂದು ತೆರೆಗೆ ಬರುತ್ತಿದೆ. ಹಿಂದಿನ ಸಿನಿಮಾದಲ್ಲಿ ಅನುಭವಿ ಕಲಾವಿದರೊಂದಿಗೆ ಕೆಲಸ ಮಾಡಿರುವ ನೂತನ್ ‘ಅಸ್ತಿತ್ವ’ದಲ್ಲಿ ಹೊಸಬರನ್ನು ಕಲೆಹಾಕಿದ್ದಾರೆ.

ಯುವರಾಜ್ ಚಿತ್ರದ ನಾಯಕ. ಪ್ರಜ್ವಲ್ ಪೂವಯ್ಯ, ರಶ್ಮಿ, ಸೋನು ಗೌಡ ನಾಯಕಿಯರು. ಇವರೆಲ್ಲ ಇದ್ದರೂ ಚಿತ್ರದ ನಾಯಕನ ಸ್ಥಾನದಲ್ಲಿ ನಿಲ್ಲುವುದು ಮಾತ್ರ ಕಥೆ, ಚಿತ್ರಕಥೆ ಮತ್ತು ಸಂಗೀತವೇ ಎಂಬುದು ನಿರ್ದೇಶಕರ ಅನಿಸಿಕೆ. ‘ಇದೊಂದು ಜಾಗತಿಕ ಕಂಟೆಂಟ್’ ಎಂದ ನಿರ್ದೇಶಕರಿಗೆ ಚಿತ್ರದ ಕಥಾವಸ್ತುವಿನ ಮೇಲೆ ಅತಿಯಾದ ವಿಶ್ವಾಸವಿದೆ.

ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡುವುದು ಅಪಾಯ ಎಂದು ತಮ್ಮ ಅನುಭವ ಹೇಳಿಕೊಳ್ಳುವ ನೂತನ್, ‘ಜಗತ್ತಿನ ಯಾವ ಭಾಗದಲ್ಲಾದರೂ ಈ ಸಿನಿಮಾ ನೋಡಿಸಿಕೊಳ್ಳುತ್ತದೆ’ ಎನ್ನುವ ಆತ್ಮವಿಶ್ವಾಸ ಹೊಂದಿದ್ದಾರೆ. ‘ಭಾವನೆಗಳಿಗೆ ಹತ್ತಿರವಿರುವ ಕಥೆ ಈ ಚಿತ್ರದ್ದು’ ಎಂದ ನಿರ್ದೇಶಕರು, ಸರಳ ಮತ್ತು ವಾಸ್ತವದ ನೆಲೆಯಲ್ಲಿ ರೋಚಕವಾಗಿ ಕಥೆಯನ್ನು ನಿರೂಪಿಸಿದ್ದಾರಂತೆ.

ಸಂಭಾಷಣೆಗಿಂತ ಅಭಿನಯದಲ್ಲೇ ಎಲ್ಲ ಭಾವಗಳನ್ನು ತೋರಿಸುವ ಸವಾಲು ಎದುರಿಸಿರುವ ನಾಯಕ ಯುವರಾಜ್‌, ಎರಡು ಭಿನ್ನ ಪಾತ್ರಗಳಲ್ಲಿ ತಮ್ಮ ಪ್ರತಿಭೆ ತೋರಿದ್ದಾರಂತೆ. ಮೊದಲ ಚಿತ್ರದಲ್ಲಿ ಅಭಿನಯಿಸುತ್ತಿರುವ ಐಟಿ ಉದ್ಯೋಗಿ ಯುವರಾಜ್, ‘ಗಾಂಧಿನಗರದಲ್ಲಿ ನನ್ನ ಅಸ್ತಿತ್ವ ಉಳಿಸಿಕೊಳ್ಳಲು ಈ ಸಿನಿಮಾ ಮೊದಲ ಪ್ರಯೋಗ’ ಎಂದರು. ರಂಗಭೂಮಿ ನಟನೆಯ ಅನುಭವವೂ ಅವರಿಗಿದೆ.

‘ಚಿತ್ರ ಯಾರಿಗೂ ಬೋರ್ ಹೊಡೆಸುವುದಿಲ್ಲ’ ಎಂದರು ಪ್ರಜ್ವಲ್ ಪೂವಯ್ಯ. ಸೋನು ಗೌಡ ಚಿಕ್ಕ ಪಾತ್ರ ನಿರ್ವಹಿಸಿದ್ದರೂ ಅದು ಚಿತ್ರಕ್ಕೆ ತಿರುವು ಕೊಡುವ ದೃಶ್ಯ. ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ಶೈನ್ ಶೆಟ್ಟಿ, ‘ಧಾರಾವಾಹಿಗಳಲ್ಲಿ ವರ್ಷವಿಡೀ ಒಂದೇ ಪಾತ್ರಕ್ಕೆ ಅಂಟಿಕೊಂಡಿರುತ್ತೇವೆ. ನಮ್ಮ ಕೌಶಲ ತೋರಿಸಲಾಗುವುದಿಲ್ಲ. ಆದರೆ ಸಿನಿಮಾದಲ್ಲಿ ಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.