ಧಾರಾವಾಹಿಗಳ ಸನ್ನಿವೇಶಕ್ಕೆ ತಕ್ಕಂತೆ ವಿದೇಶಗಳಲ್ಲಿ ಶೂಟಿಂಗ್ ನಡೆಸುವುದು ಸಾಮಾನ್ಯವಾಗಿದೆ. ಇದಕ್ಕೆ ‘ವಿದ್ಯಾ ವಿನಾಯಕ’ ಧಾರಾವಾಹಿ ಮತ್ತೊಂದು ಸೇರ್ಪಡೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಧಾರಾವಾಹಿ ತಂಡ ಇತ್ತೀಚೆಗೆ ಇಟಲಿ ಪ್ರವಾಸ ಮುಗಿಸಿಕೊಂಡು ಬಂದಿದೆ.
ವಿದ್ಯಾ ಮತ್ತು ವಿನಾಯಕನ ಮಧುಚಂದ್ರದ ಕಥೆಯನ್ನು ಇಟಲಿಯ ಪ್ರಸಿದ್ಧ ತಾಣಗಳಾದ ಮಿಲಾನ್, ಲೆಕ್ಕೋ ಸೇರಿದಂತೆ ಹಲವೆಡೆ ಚಿತ್ರೀಕರಿಸಲಾಗಿದೆ. ಕನ್ನಡದ ಧಾರಾವಾಹಿಯೊಂದು ಇಟಲಿಯಲ್ಲಿ ಚಿತ್ರೀಕರಣ ನಡೆಸಿರುವುದು ಇದೇ ಮೊದಲು. ಇಟಲಿಗೆ ಬಂದಾಗಲೂ ವಿದ್ಯಾ, ವಿನಾಯಕ ಪ್ರೀತಿ ಕಂಡುಕೊಳ್ಳುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರ ಸಿಗಲು ಪ್ರೇಕ್ಷಕರು ಈ ಸಂಚಿಕೆಗಳಿಗೆ ಕಾಯುವುದು ಅನಿವಾರ್ಯ.
ಇಟಲಿಯ ಕೊರೆಯುವ ಚಳಿಯಲ್ಲಿ ನಡೆದಾಡುವುದೇ ಕಷ್ಟಕರ. ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ಗಂಟೆಗಟ್ಟಲೆ ಶೂಟಿಂಗ್ ಮಾಡಿದ ಅದ್ಭುತ ಅನುಭವವನ್ನು ವಿದ್ಯಾ ಪಾತ್ರಧಾರಿ ಕವಿತಾ ಹಂಚಿಕೊಂಡಿದ್ದಾರೆ.
ಕಥೆಗೆ ತಕ್ಕಂತೆ ಬದಲಾಗುವ ಹೊಸ ಹುರುಪಿನ ವಿನಾಯಕನಾಗಿ ದಿಲೀಪ್ ಶೆಟ್ಟಿ ನಟಿಸಿದ್ದಾರೆ. ತಮ್ಮ ಪಾತ್ರ ಕುರಿತು ಅವರಲ್ಲೂ ಉತ್ಸಾಹ ಇಮ್ಮಡಿಸಿದೆ.
ಇಟಲಿಯ ಜನರಿಗೆ ಕನ್ನಡ ಕಲಿಸಿದ್ದು ಧಾರಾವಾಹಿ ತಂಡಕ್ಕೆ ಎಂದಿಗೂ ಮರೆಯದ ಮಧುರ ಅನುಭವ. ಕಥಾ ಭಾಗದಲ್ಲಿ ನಿರ್ದೇಶಕ ದಿಲೀಪ್ ರಾಜ್ ಕೂಡ ಒಂದು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರ ವಿದ್ಯಾ ಮತ್ತು ವಿನಾಯಕನ ಜೀವನದಲ್ಲಿ ಹೊಸ ತಿರುವು ನೀಡಲಿದೆ. ಈ ಎಲ್ಲ ದೃಶ್ಯಗಳನ್ನು ಛಾಯಾಗ್ರಾಹಕ ಮನು ಸೆರೆ ಹಿಡಿದಿದ್ದಾರೆ.
ಮಾರ್ಚ್ ಮೊದಲ ವಾರದಿಂದ ಈ ಸಂಚಿಕೆಗಳು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.