ADVERTISEMENT

ಹೊಸಬರ 9 ದಿನಗಳು

​ಪ್ರಜಾವಾಣಿ ವಾರ್ತೆ
Published 22 ಮೇ 2020, 7:04 IST
Last Updated 22 ಮೇ 2020, 7:04 IST
ಮಾನಸಾ, ದೈವಿಕ್‌
ಮಾನಸಾ, ದೈವಿಕ್‌   

ಒಂಬತ್ತು ದಿನಗಳು, ಒಂಬತ್ತು ಪಾತ್ರಗಳ ಸುತ್ತ ನಡೆಯುವ ಘಟನೆಗಳನ್ನೇ ಆಧರಿಸಿ ನಿರ್ಮಿಸಲಾಗುತ್ತಿರುವ ‘9 ದಿನಗಳು’ ಚಿತ್ರಕ್ಕೆ ಎಸ್‌.ಎಸ್‌. ವಿಧಾ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರ ಬಹುತೇಕ ಪೂರ್ಣಗೊಂಡಿದ್ದು, ಬಾಕಿ ಕೆಲಸಗಳನ್ನು ಲಾಕ್‌ಡೌನ್‌ ತೆರವಾದ ನಂತರ ಪೂರ್ಣಗೊಳಿಸಿ ಆದಷ್ಟು ಶೀಘ್ರ ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

ಇದೊಂದು ಹೊಸಬರ ಚಿತ್ರತಂಡ.ನಾಯಕನಾಗಿ ದೈವಿಕ್‌ ಮತ್ತು ನಾಯಕಿಯಾಗಿಮಾನಸಾ ಅವರಿಗೆ ಇದು ಚೊಚ್ಚಲ ಸಿನಿಮಾ. ‘9 ದಿನಗಳು’ ಚಿತ್ರದಲ್ಲಿ ತಮ್ಮ ಅದೃಷ್ಟ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ ಈ ಇಬ್ಬರು. ವಿಧಾ ಅವರಿಗೂ ಇದು ಮೊದಲ ಸಿನಿಮಾ. 2015ರಲ್ಲಿ ‘ಉಗ್ರಾಕ್ಷ’ ಸಿನಿಮಾ ಕೈಗೆತ್ತಿಕೊಂಡಿದ್ದರೂ ಅದು ಕೈಗೂಡಲಿಲ್ಲ. ಈ ಚಿತ್ರದಲ್ಲಿ ನಟಿ ದೀಪಿಕಾ ಕಾಮಯ್ಯ ನಾಯಕಿಯಾಗಿ ಮತ್ತು ಮೋಹನ್‌ ನಾಯಕನಾಗಿ ನಟಿಸುತ್ತಿದ್ದರು. ಆದರೆ, ಈ ಸಿನಿಮಾ ಅರ್ಧಕ್ಕೆ ನಿಂತಿದೆ.

‘9 ದಿನಗಳು’ ಚಿತ್ರದ ಮಾತಿನ ಭಾಗ ಪೂರ್ಣಗೊಂಡಿದೆ. ಒಂದು ಫೈಟ್‌ ಮತ್ತು ಎರಡು ಹಾಡುಗಳ ಚಿತ್ರೀಕರಣವೂ ಆಗಿದೆ. ಎರಡು ಫೈಟ್‌ ಮತ್ತುಎರಡು ಹಾಡುಗಳ ಚಿತ್ರೀಕರಣ ಬಾಕಿ ಇವೆ. ಬೆಂಗಳೂರು,ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಹಾರೋಹಳ್ಳಿ, ಬಾಗೇಪಲ್ಲಿ, ಹೊಸಕೋಟೆ, ಕನಕಪುರ ಭಾಗದಲ್ಲಿ 45 ದಿನಗಳ ಚಿತ್ರೀಕರಣವಾಗಿದೆ ಎಂದು ಮಾತಿಗಿಳಿದರು ನಿರ್ದೇಶಕಎಸ್‌.ಎಸ್‌. ವಿಧಾ. ಈ ಚಿತ್ರದ ಮೇಲೆ ಅವರಿಗೂ ತುಂಬಾ ನಿರೀಕ್ಷೆಗಳಿವೆ. ಚಿತ್ರತಂಡದಲ್ಲಿರುವವರು ಬಹುತೇಕ ಎಲ್ಲರೂ ಹೊಸಬರೇ, ಹಾಗೆಯೇ ಚಿತ್ರದಲ್ಲೂ ಹೊಸತನ ತುಂಬಿತುಳುಕಲಿದೆ ಎನ್ನುವಮಾತು ಸೇರಿದರು.

ADVERTISEMENT

ಸಸ್ಪೆನ್ಸ್‌– ಥ್ರಿಲ್ಲರ್‌ ಜಾನರ್‌ ಕಥೆ ಇದರಲ್ಲಿ.ಐವರು ಹುಡುಗರು, ನಾಲ್ವರು ಹುಡುಗಿಯರು ಹೊಸ ವರ್ಷದ ಮೊದಲ ದಿನ ಮೋಜುಮಸ್ತಿಗಾಗಿ ದೂರದ ಸ್ಥಳವೊಂದಕ್ಕೆ ಹೋಗುತ್ತಾರೆ. ಅಲ್ಲಿ ಒಂದು ಅಪಘಾತ ನಡೆದು, ಸಾವು ಸಂಭವಿಸುತ್ತದೆ. ಆ ಸಾವನ್ನು ಮುಚ್ಚಿ ಹಾಕಲು ಅಧಿಕಾರ ಮತ್ತು ಹಣ ಹೇಗೆ ಕೆಲಸ ಮಾಡುತ್ತದೆ ಹಾಗೂ ಅಪಘಾತದಲ್ಲಿ ಮಡಿದವನ ಆತ್ಮಕ್ಕೆ ಶಾಂತಿ– ಮುಕ್ತಿ ಹೇಗೆ ಸಿಗುತ್ತದೆ ಎನ್ನುವುದು ಚಿತ್ರದ ಕುತೂಹಲ. ಇದರಲ್ಲಿ ಒಂದು ಅದ್ಭುತವಾದ ಸಾಮಾಜಿಕ ಸಂದೇಶವೂ ಇದೆಎಂದು ವಿಧಾ ಅವರು ಕಥೆಯ ಬಗ್ಗೆಯೂ ಹೇಳಿದರು. ನಿರ್ದೇಶನದ ಜತೆಗೆ ರಚನೆ, ಚಿತ್ರಕಥೆ, ಸಂಭಾಷಣೆಯ ನೊಗವನ್ನು ವಿಧಾ ನಿಭಾಯಿಸಿದ್ದಾರೆ.

ಎಂ.ವಿ.ಫಿಲಂಸ್ ಲಾಂಛನದಡಿಯಲ್ಲಿ ಡಾ.ಎಂ.ವೆಂಕಟಸ್ವಾಮಿ ಬಂಡವಾಳ ಹೂಡಿದ್ದಾರೆ. ಜತೆಗೆ ಚಿತ್ರದಲ್ಲಿನಡಿಸಿಪಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕಾರ್ತಿಕ್ ಜೆ.ಕಿರಣ್ ಛಾಯಾಗ್ರಹಣ,ಎಂ.ಸಂಜೀವ್‍ರಾವ್ ಸಂಗೀತ, ಅಲ್ಟಿಮೇಟ್‍ ಶಿವು ಸಾಹಸ, ಹರಿಕೃಷ್ಣ ನೃತ್ಯ ಸಂಯೋಜನೆ ಇದೆ.ತಾರಗಣದಲ್ಲಿ ಅರ್ಜುನ್‍ವೀರ್, ಅರ್ಚನಾ, ಕಬಾಡ ಸಂತೋಷ್, ಸೋನು ರಕ್ಷಾ, ಗಿರೀಶ್, ಸಂದೀಪ್, ಸಂಜು, ಮೋಹನ್ ಇದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.