ಬೆಂಗಳೂರು: ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘವು ಬುಧವಾರ ಹಮ್ಮಿಕೊಂಡಿದ್ದ ‘ಮಾಸದ ಮಾತು‘ ಕಾರ್ಯಕ್ರಮವು ಕನ್ನಡ ಸಿನಿಮಾದ ತೊಂಬತ್ತು ವರ್ಷಗಳ ಇತಿಹಾಸದ ಮೆಲುಕು ಹಾಕಲು ವೇದಿಕೆಯಾಯಿತು.
ಕನ್ನಡದ ಮೊದಲ ಚಿತ್ರ ‘ಸತಿ ಸುಲೋಚನಾ’ಕ್ಕೆ 90 ವರ್ಷ ತುಂಬಿದ್ದರೆ, ‘ಬೇಡರ ಕಣ್ಣಪ್ಪ’ ಚಿತ್ರಕ್ಕೆ 70 ವರ್ಷಗಳಾಗಿವೆ. 1934ರಲ್ಲಿಯೇ ಕನ್ನಡ ಚಿತ್ರಗಳು ಬಂದವಾದರೂ ಅದಕ್ಕೆ ವೇಗ ಬಂದಿದ್ದು 1954ರಿಂದ. ರಾಜಕುಮಾರ್ ಚಿತ್ರರಂಗ ಪ್ರವೇಶಿಸಿದ ಬಳಿಕ ಕನ್ನಡ ಚಿತ್ರರಂಗದ ದಿಕ್ಕು ಬದಲಾಗಿದ್ದು ಸೇರಿದಂತೆ ಹಲವು ಘಟನೆಗಳನ್ನು ಕಾರ್ಯಕ್ರಮದಲ್ಲಿ ನೆನಪು ಮಾಡಿಕೊಳ್ಳಲಾಯಿತು.
ಹೊಸ ಅಲೆಯ ಚಿತ್ರಗಳು ತಾಂತ್ರಿಕವಾಗಿ ದುರ್ಬಲವಾಗಿರುವುದಲ್ಲದೇ ಬಹುತೇಕ ಸಿನಿಮಾಗಳಿಂದ ಅಭಿರುಚಿಯ ಅಧಃಪತನವಾಗುತ್ತಿದೆ ಎಂಬ ವಿಷಾದದ ಧ್ವನಿ ಮೂಡಿತು.
ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘವು ಮಾಸದ ಮಾತು ಸರಣಿ ಉಪನ್ಯಾಸವನ್ನು ಹಮ್ಮಿಕೊಂಡು ಬರುತ್ತಿದ್ದು, ಇದು ಐದನೇ ತಿಂಗಳ ಕಾರ್ಯಕ್ರಮವಾಗಿದೆ.
ತೇಜಸ್ ಕನ್ನಡ ಸಂಘದ ಕಲಾವಿದರಿಂದ ಗೀತಗಾಯನ ನಡೆಯಿತು. ‘ಸುಧಾ’ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ. ಉಪನ್ಯಾಸ ನೀಡಿದರು. ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘದ ಅಧ್ಯಕ್ಷ ಡಿ. ರಾಜೇಶ್, ಪ್ರಧಾನ ಕಾರ್ಯದರ್ಶಿ ದೇವಜಾರ ಕೆ.ಡಿ., ಹಿಂ.ವಿ.ಕಾ. ಅಧಿಕಾರಿಗಳ ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಎಚ್.ವೆಂಕಟೇಶ್, ಮತ್ತು ತೇಜಸ್ ಕನ್ನಡ ಸಂಘದ ಅಧ್ಯಕ್ಷ ಎಂ. ಚಂದ್ರಶೇಖರಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.