ಬಹುನಿರೀಕ್ಷಿತ ‘ಆದಿಪುರುಷ್’ ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಆ ಸಿನಿಮಾದ ಕುರಿತ ಸಂದರ್ಶನವೊಂದರಲ್ಲಿ ಸೈಫ್ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಸಂದರ್ಶನದಲ್ಲಿ ಸೈಫ್ ರಾವಣ ಪಾತ್ರದ ಬಗ್ಗೆ ಮಾತನಾಡುತ್ತಾ ‘ರಾವಣ ಮಾನವೀಯ ಗುಣವುಳ್ಳವನು’ ಎಂಬ ಹೇಳಿಕೆ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿದ್ದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದರು. ತಕ್ಷಣಕ್ಕೆ ಎಚ್ಚೆತ್ತ ಸೈಫ್ ಕ್ಷಮೆ ಕೇಳಿದ್ದಲ್ಲದೇ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.
‘ನಾನು ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಅದು ಜನರ ಭಾವನೆಗಳನ್ನು ಘಾಸಿಗೊಳಿಸಿದೆ ಎಂಬುದು ನನಗೆ ತಿಳಿಯಿತು. ನಾನು ಅದನ್ನು ಉದ್ದೇಶಪೂರ್ವಕವಾಗಿ ಹೇಳಿದ್ದಲ್ಲ. ಅಲ್ಲದೇ ನನ್ನ ಮಾತಿನ ಅರ್ಥವೂ ಅದಾಗಿರಲಿಲ್ಲ. ನಾನು ನನ್ನ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ, ಅಲ್ಲದೇ ಎಲ್ಲರ ಬಳಿ ವಿನಮೃತೆಯಿಂದ ಕ್ಷಮೆ ಕೇಳುತ್ತಿದ್ದೇನೆ. ರಾಮ ನನ್ನ ಪಾಲಿಗೆ ಯಾವಾಗಲೂ ಸದಾಚಾರ ಹಾಗೂ ವೀರತ್ವದ ಸಂಕೇತವಾಗಿದ್ದಾರೆ. ಆದಿಪುರುಷ್ ಸಿನಿಮಾವೂ ದುಷ್ಟರ ವಿರುದ್ಧದ ಹೋರಾಟದಲ್ಲಿ ಒಳ್ಳೆಯತನಕ್ಕೆ ಸಿಗುವ ಗೆಲುವನ್ನು ತೋರಿಸುವ ಸಿನಿಮಾವಾಗಿದೆ. ಮೂಲ ಮಹಾಕಾವ್ಯಕ್ಕೆ ಯಾವುದೇ ಧಕ್ಕೆ ಬಾರದಂತೆ ಸಿನಿಮಾವನ್ನು ಪ್ರಸ್ತುತ ಪಡಿಸಲು ಇಡೀ ತಂಡ ಶ್ರಮಿಸುತ್ತಿದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.