ADVERTISEMENT

ಕುಟುಂಬ ಸದಸ್ಯರ ಸಮ್ಮುಖದಲ್ಲಿ ನೆರವೇರಿದ ಅರ್ಜುನ್ ಸರ್ಜಾ ಪುತ್ರಿ ನಿಶ್ಚಿತಾರ್ಥ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಅಕ್ಟೋಬರ್ 2023, 12:57 IST
Last Updated 29 ಅಕ್ಟೋಬರ್ 2023, 12:57 IST
   

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಅವರ ನಿಶ್ಚಿತಾರ್ಥ ಇತ್ತೀಚೆಗೆ ಉಮಾಪತಿ ಅವರೊಂದಿಗೆ ನೆರವೇರಿದೆ.‌ ಚೆನ್ನೈನಲ್ಲಿ ಅರ್ಜುನ್ ಸರ್ಜಾ ನಿರ್ಮಿಸಿರುವ ತಮ್ಮ ಆರಾಧ್ಯ ದೈವ ಆಂಜನೇಯನ ದೇವಸ್ಥಾನದಲ್ಲಿರುವ ಸೀತಾರಾಮರ ಸನ್ನಿಧಾನದಲ್ಲಿ ಐಶ್ವರ್ಯ ಹಾಗೂ ಉಮಾಪತಿ ಅವರು ಉಂಗುರ ಬದಲಾವಣೆ ಮಾಡಿಕೊಂಡರು.

ಕುಟುಂಬ ಸದಸ್ಯರು, ನಟ ಮತ್ತು ಸಂಬಂಧಿ ಧ್ರುವ ಸರ್ಜಾ ಹಾಗೂ ಅರ್ಜುನ್ ಸರ್ಜಾ ಆಪ್ತರಾದ ನಟ ವಿಶಾಲ್ ಸೇರಿದಂತೆ ಕೆಲವು ಗೆಳೆಯರು ಈ ಸಮಾರಂಭಕ್ಕೆ ಸಾಕ್ಷಿಯಾದರು.

ಐಶ್ವರ್ಯ ಅವರು ಈಗಾಗಲೇ ನಟಿಯಾಗಿ ಜನಪ್ರಿಯರಾಗಿದ್ದು, ಉಮಾಪತಿ ಅವರು ನಟನಾಗಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವೊಂದನ್ನು ನಿರ್ದೇಶನ ಕೂಡ ಮಾಡಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಉಮಾಪತಿ ಅವರ ತಂದೆ ತಂಬಿ ರಾಮಯ್ಯ ಹೆಸರಾಂತ ಹಾಸ್ಯನಟರಾಗಿ ಜನಮನ್ನಣೆ ಪಡೆದಿದ್ದಾರೆ.

ADVERTISEMENT

ನಿಶ್ಚಿತಾರ್ಥದಲ್ಲಿ ಉಮಾಪತಿ ಹಾಗೂ ಐಶ್ವರ್ಯ ಅವರ ಸುಂದರ ಉಡುಗೆ ಎಲ್ಲರ ಗಮನ ಸೆಳೆಯಿತು. ಉಮಾಪತಿ ಅವರಿಗೆ ಮನೀಶ್ ಮಲ್ಹೋತ್ರ ಹಾಗೂ ಐಶ್ವರ್ಯ ಅವರಿಗೆ ಜಯಂತಿ ರೆಡ್ಡಿ ಅವರು ವಸ್ತ್ರವಿನ್ಯಾಸ ಮಾಡಿದ್ದರು. ಆಕರ್ಷಕವಾಗಿದ್ದ ರೂಬಿ ಹರಳಿನ ಬಂಗಾರದ ನಿಶ್ಚಿತಾರ್ಥದ ಉಂಗುರಗಳನ್ನು ಜೈಪುರದಿಂದ ತರಿಸಲಾಗಿತ್ತು.

2024ರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಐಶ್ವರ್ಯ ಹಾಗೂ ಉಮಾಪತಿ ಅವರ ಕಲ್ಯಾಣ ಮಹೋತ್ಸವ ನೆರವೇರಲಿದೆ ಎಂದು ನಟ ಅರ್ಜುನ್ ಸರ್ಜಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.