
ನಟ ಇಮ್ರಾನ್ ಹಶ್ಮಿ
ಬಾಲಿವುಡ್ ಜನಪ್ರಿಯ ನಟ ಇಮ್ರಾನ್ ಹಶ್ಮಿ ತಮ್ಮ ಜೀವನದಲ್ಲಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಮಗನ ಕ್ಯಾನ್ಸರ್ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ‘2014ರಲ್ಲಿ ಕಿರಿ ಮಗ ಅಯಾನ್ಗೆ ಕ್ಯಾನ್ಸರ್ ಪತ್ತೆಯಾದಾಗ ಇಡೀ ಕುಟುಂಬ ಜೀವನವೇ ಸಂಪೂರ್ಣವಾಗಿ ಬದಲಾಯಿತು. ಆ ಮುಂದಿನ ಐದು ವರ್ಷಗಳು ನಮಗೆ ಸವಾಲಿನದ್ದಾಗಿದ್ದವು. ಅದೇ ಅನುಭವ ನನಗೆ ಪುಸ್ತಕ ಬರೆಯಲು ಸ್ಫೂರ್ತಿ ನೀಡಿತು’ ಎಂದು ಹೇಳಿಕೊಂಡಿದ್ದಾರೆ.
ರಣವೀರ್ ಅಲಹಾಬಾದಿಯಾ ಅವರ ‘ದಿ ರಣವೀರ್ ಶೋ’ ಎಂಬ ಪಾಡ್ಕಾಸ್ಟ್ನಲ್ಲಿ ನಟ ಇಮ್ರಾನ್ ಹಶ್ಮಿ ಮಗನ ಕ್ಯಾನ್ಸರ್ ಪಯಣದ ಬಗ್ಗೆ ಹಂಚಿಕೊಂಡಿದ್ದಾರೆ. ‘ನನ್ನ ಮಗ 2014ರಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ. ಅದು ನನ್ನ ಜೀವನದ ಅತ್ಯಂತ ಕಷ್ಟದ ದಿನಗಳಾಗಿತ್ತು. ಆ ಘಟನೆ ಬಗ್ಗೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆ ಸಮಸ್ಯೆ ಸುಮಾರು ಐದು ವರ್ಷಗಳ ಕಾಲ ಇತ್ತು’ ಎಂದರು.
‘2014ರ ಜನವರಿ 13ರಂದು ನಮ್ಮ ಮಗನೊಂದಿಗೆ ಪಿಜ್ಜಾ ತಿನ್ನುತ್ತಿದ್ದೆವು. ಆಗ ಶೌಚಾಲಯಕ್ಕೆ ಹೋದಾಗ ಅವನ ಮೂತ್ರದಲ್ಲಿ ರಕ್ತ ಕಾಣಿಸಿತು. ಆ ಕೂಡಲೇ ಮಗನನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋದೆವು. ಆಗ ವೈದ್ಯರು, ನಿಮ್ಮ ಮಗನಿಗೆ ಕ್ಯಾನ್ಸರ್ ಇದೆ ಎಂದು ಹೇಳಿದರು. ಕ್ಯಾನ್ಸರ್ ಹೆಸರು ಕೇಳುತ್ತಿದ್ದಂತೆ 12 ಗಂಟೆಗಳ ಅಂತರದಲ್ಲಿ ನಮ್ಮ ಇಡೀ ಜೀವನ ಸಂಪೂರ್ಣವಾಗಿ ಬದಲಾಯಿತು’ ಎಂದರು.
‘ಮಗನಿಗೆ ಕ್ಯಾನ್ಸರ್ ಇರುವುದು ಗೊತ್ತಾಗುತ್ತಿದ್ದಂತೆ ಆ ಮರು ಕ್ಷಣವೇ ಮಗನಿಗೆ ಶಸ್ತ್ರಚಿಕಿತ್ಸೆ ಮಾಡಲು ಆಸ್ಪತ್ರೆಗೆ ಸೇರಿಸಬೇಕಾಯಿತು. ಬಳಿಕ ಅವನಿಗೆ ಕೀಮೋಥೆರಪಿ ಮಾಡಲಾಯಿತು. ನನ್ನ ಹೆಚ್ಚಿನ ಸಮಯವನ್ನು ಆಸ್ಪತ್ರೆಯಲ್ಲಿಯೇ ಕಳೆದೆ. ಹೆಚ್ಚಾಗಿ ಮಗನ ಆರೋಗ್ಯದ ಕಡೆ ಗಮನ ಹರಿಸುವಲ್ಲಿ ನಿರತನಾದೆ. ಸರಿಯಾದ ಚಿಕಿತ್ಸೆಯ ಸಹಾಯದಿಂದ ನನ್ನ ಮಗ ಕ್ಯಾನ್ಸರ್ನಿಂದ ಗೆದ್ದು ಬಂದ’ ಎಂದು ಹೇಳಿದ್ದಾರೆ.
ಇದೇ ಘಟನೆ ನಟನಿಗೆ ಅವರಿಗೆ ಪುಸ್ತಕ ಬರೆಯಲು ಪ್ರೇರಣೆ ನೀಡಿತ್ತು. ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸಾಕಷ್ಟು ಪೋಷಕರಿಗೆ ಸಹಾಯ ಮಾಡುವ ಉದ್ದೇಶದಿಂದ ನಟ ಇಮ್ರಾನ್ ಹಶ್ಮಿ ‘The Kiss of Life’ ಎಂಬ ಪುಸ್ತಕವನ್ನು ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.