ನಟ ರಾಕಿಂಗ್ ಸ್ಟಾರ್ ಯಶ್ ಪಾಂಡಿಚೇರಿ ಸಮೀಪದ ತಿರುನಲ್ಲಾರ್ ಶನೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಜೊತೆ ದೇವಾಲಯಕ್ಕೆ ತೆರಳಿರುವ ಯಶ್ ದೇವಾಲಯದ ಅಂಗಣದಲ್ಲಿ ಕುಳಿತಿರುವ ಫೋಟೊ ಸದ್ಯ ವೈರಲ್ ಆಗಿದೆ. ಫೋಟೊದಲ್ಲಿ ಅಶ್ವಥ್ನಾರಾಯಣ್ ಹಾಗೂ ಯಶ್ ಅಕ್ಕಪಕ್ಕ ಕುಳಿತಿದ್ದಾರೆ. ಈ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ತಿರುನಲ್ಲಾರ್ ಶನೀಶ್ವರ ಹಾಗೂ ಧರಬರೇಣ್ಯಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದ ಯಶ್ ಶನಿ ದೇವರ ಆಶೀರ್ವಾದ ಪಡೆದಿದ್ದಾರೆ. ಜನವರಿ 8ಕ್ಕೆ ಈ ನಟ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಕೊರೊನಾ ಕಾರಣದಿಂದ ಚಂದವವನದ ಅನೇಕ ನಟರು ತಮ್ಮ ಹುಟ್ಟುಹಬ್ಬವನ್ನು ಕುಟುಂಬದವರೊಂದಿಗೆ ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಯಶ್ ಇಲ್ಲಿಯವರೆಗೆ ತಮ್ಮ ಹುಟ್ಟುಹಬ್ಬದ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇವರ ಹುಟ್ಟಿದ ದಿನದಿಂದು ಕೆಜಿಎಫ್: ಚಾಪ್ಟರ್ 2 ರ ಟೀಸರ್ ಕೂಡ ಬಿಡುಗಡೆಯಾಗಲಿದೆ.
ಹೈದರಾಬಾದ್ನಲ್ಲಿ ಕೆಜಿಎಫ್ ಶೂಟಿಂಗ್ ಮುಗಿದ ತಕ್ಷಣ ಯಶ್ ಬೆಂಗಳೂರಿನ ಹೋಟೆಲ್ವೊಂದರಲ್ಲಿ ಕ್ವಾರಂಟೈನ್ನಲ್ಲಿದ್ದರು. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಈ ವರ್ಷ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಪ್ರಶಾಂತ್ ನೀಲ್ ನಿರ್ದೇಶನ ಈ ಸಿನಿಮಾದಲ್ಲಿ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.