ADVERTISEMENT

ನಾನು ಎಲ್ಲಿಗೂ ಓಡಿ ಹೋಗಿಲ್ಲ: ವಿಚಾರಣೆ ಬಳಿಕ ರಾಧಿಕಾ ಕುಮಾರಸ್ವಾಮಿ ಪ್ರತಿಕ್ರಿಯೆ

ಯುವರಾಜ್‌ ಸ್ವಾಮಿಯಿಂದ ಹಣ ಪಡೆದ ಆರೋಪ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 18:02 IST
Last Updated 8 ಜನವರಿ 2021, 18:02 IST
ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ   

ಬೆಂಗಳೂರು: ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿ ಯುವರಾಜ್‌ ಅವರಿಂದ ಹಣ ಪಡೆದ ಆರೋಪದಡಿ ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ಸಿಸಿಬಿ ಪೊಲೀಸರು ಶುಕ್ರವಾರ ವಿಚಾರಣೆಗೆ ಒಳಪಡಿಸಿದರು.

ಎಸಿಪಿ ನಾಗರಾಜ್ ನೇತೃತ್ವದ ತಂಡ, ನಾಲ್ಕು ಗಂಟೆ ರಾಧಿಕಾ ಅವರನ್ನು ವಿಚಾರಣೆ ನಡೆಸಿ ಲಿಖಿತ ಹೇಳಿಕೆ ಪಡೆಯಿತು.

ಪೊಲೀಸರ ಪ್ರಶ್ನೆಗೆ ಉತ್ತರಿಸಿರುವ ರಾಧಿಕಾ, ‘ಯುವರಾಜ್ ವಂಚನೆ ಬಗ್ಗೆ ನನಗೆ ಗೊತ್ತಿರಲಿಲ್ಲ. ಅವರ ನನ್ನ ತಂದೆಯ ಸ್ನೇಹಿತರು. ವೈಷ್ಣವಿ ಪ್ರೊಡಕ್ಷನ್ ಅಡಿಯಲ್ಲಿ ‘ನಾಟ್ಯ ರಾಣಿ ಶಾಂತಲಾ’ ಹೆಸರಿನ ಸಿನಿಮಾ ಮಾಡಲು ಮಾತುಕತೆ ನಡೆಸಿದ್ದರು. ಅದಕ್ಕೆ ನಾನು ಒಪ್ಪಿದ್ದೆ. ಮುಂಗಡವಾಗಿ ₹ 15 ಲಕ್ಷವನ್ನು ತಮ್ಮ ಖಾತೆಯಿಂದ ನನ್ನ ಖಾತೆಗೆ ಹಾಕಿದ್ದರು. ಜೊತೆಗೆ, ಬೇರೊಬ್ಬ ನಿರ್ಮಾಪಕರ ಖಾತೆಯಿಂದ ₹ 60 ಲಕ್ಷ ಜಮೆ ಮಾಡಿಸಿದ್ದರು. ಅವರು ಯಾರೆಂದು ವಿಚಾರಿಸಿದ್ದಕ್ಕೆ, ಸಂಬಂಧಿಯೆಂದು ತಿಳಿಸಿದ್ದರು’ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

‘ನಾನು ನಟಿ. ನಿರ್ಮಾಪಕಿಯೂ ಹೌದು. ಸಿನಿಮಾ ಕುರಿತು ಯುವರಾಜ್ ಜೊತೆ ಮಾತನಾಡಿದ್ದೆ. ಹಣ ಪಡೆದ ಮಾತ್ರಕ್ಕೆ ನಾನೇ ಆರೋಪಿ ಎನ್ನುವುದು ಎಷ್ಟು ಸರಿ. ನಿಮ್ಮ ತನಿಖೆಗೆ ನನ್ನ ಸಹಕಾರ ಇರುತ್ತದೆ. ನೀವು ಯಾವಾಗ ಕರೆದರೂ ವಿಚಾರಣೆಗೆ ಬರಲು ಸಿದ್ಧ’ ಎಂದೂ ರಾಧಿಕಾರ ತಿಳಿಸಿರುವುದಾಗಿ ಗೊತ್ತಾಗಿದೆ.

ಎಲ್ಲಿಗೂ ಓಡಿ ಹೋಗಿಲ್ಲ: ವಿಚಾರಣೆ ಬಳಿಕ ಸಿಸಿಬಿ ಕಚೇರಿಯಿಂದ ಹೊರಬಂದು ಸುದ್ದಿಗಾರರ ಜೊತೆ ಮಾತನಾಡಿದ ರಾಧಿಕಾ, ‘ಪೊಲೀಸರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇನೆ. ಮತ್ತೊಮ್ಮೆ ವಿಚಾರಣೆಗೆ ಕರೆದರೆ ಬರುತ್ತೇನೆ’ ಎಂದರು.

‘ನಾನು ಎಲ್ಲಿಗೂ ಓಡಿ ಹೋಗಿಲ್ಲ. ಹೋಗುವುದೂ ಇಲ್ಲ. ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ಮಾತೇ ಅಂತಿಮ’ ಎಂದು ಅವರು ಹೇಳಿದರು. ಸಹೋದರ ರವಿರಾಜ್ ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.