‘ಬಾಹುಬಲಿ’ ಚಿತ್ರದ ಶಿವಗಾಮಿ ಪಾತ್ರದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಬಹುಭಾಷಾ ನಟಿ ರಮ್ಯಾಕೃಷ್ಣ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದೂ ಮದ್ಯದ ಬಾಟಲಿಗಳ ಕಾರಣದಿಂದ ಎನ್ನುವುದು ವಿಶೇಷ!
ರಮ್ಯಾಕೃಷ್ಣ ಅವರ ಐಷಾರಾಮಿ ಕಾರಿನಲ್ಲಿ 104 ಮದ್ಯದ ಬಾಟಲಿಗಳು ಪತ್ತೆಯಾಗಿವೆ.ಈ ಘಟನೆ ಕಳೆದ ಗುರುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಪೊಲೀಸರು ಕಾರಿನಲ್ಲಿದ್ದ ಬಾಟಲಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.ಕಾರು ಚಾಲಕ ಸೆಲ್ವಕುಮಾರ್ನನ್ನು ಪೊಲೀಸರು ವಶಕ್ಕೆ ಪಡೆದು, ನಂತರ ವೈಯಕ್ತಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಈ ವೇಳೆ ರಮ್ಯಾಕೃಷ್ಣ ಕಾರಿನಲ್ಲೇ ಇದ್ದರು ಎನ್ನಲಾಗಿದೆ.
ಅಂದು ನಡೆಡದ್ದು ಏನು?
ತಮಿಳುನಾಡಿನ ಮಹಾಬಲಿಪುರಂ ಕಡೆಯಿಂದ ಬರುತ್ತಿದ್ದ ವಾಹನಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದರು.ಆ ವೇಳೆ ಪೂರ್ವ ಕರಾವಳಿಯ ಮುತ್ತುಕಾಡು ಚೆಕ್ಪೋಸ್ಟ್ ಬಳಿ ರಮ್ಯಾಕೃಷ್ಣ ಅವರ ಟೊಯೊಟಾ ಇನ್ನೋವಾ ಕಾರನ್ನು ಪೊಲೀಸರು ತಡೆದು ನಿಲ್ಲಿಸಿ ಪರಿಶೀಲಿಸಿದರು.
ಪೊಲೀಸರು ಗಾಡಿಯನ್ನು ಪರಿಶೀಲನೆ ಮಾಡಬೇಕು ಎಂದಾಗ ರಮ್ಯಾಕೃಷ್ಣ ಮರುಮಾತನಾಡದೆ ಒಪ್ಪಿದ್ದರು. ಕಾರಿನ ಡಿಕ್ಕಿ ತೆರೆದಾಗ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಅಲ್ಲಿ ಬಿಯರ್ ಬಾಟಲ್ಗಳ ಕ್ರೇಟ್ ಅಲ್ಲಿತ್ತು. ಅವುಗಳ ಜತೆಗೆ ಹಾಟ್ಡ್ರಿಂಕ್ಸ್ ಬಾಟಲ್ ಕೂಡ ಇದ್ದವು.
ಚೆನ್ನೈನಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲದ ಕಾರಣ ಸಿಟಿಯಲ್ಲಿ ಮದ್ಯ ಮಾರಾಟ ಹಾಗೂ ಸಾಗಣೆ ಕಾನೂನು ಬಾಹಿರ. ಲಾಕ್ಡೌನ್ ನಿರ್ಬಂಧಕ್ಕೆ ವಿರುದ್ಧವಾಗಿ ಮದ್ಯ ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ವಿವಾದಕ್ಕೆ ಸಂಬಂಧಿಸಿದಂತೆ ರಮ್ಯಾಕೃಷ್ಣ ಅಧಿಕೃತವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.