ಬೆಂಗಳೂರು: ರಾಜಕೀಯ ಮುಗಿದು ಹೋದ ಪ್ರಯಾಣ ಎಂದು ಇತ್ತೀಚೆಗೆ ಹೇಳಿದ್ದ ನಟಿ, ಮಾಜಿ ಸಂಸದೆ ರಮ್ಯಾ ಇದೀಗ ಕೋವಿಡ್ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಸಕ್ರಿಯವಾಗಿರುವ ರಮ್ಯಾ, ‘ಕೋವಿಡ್ನಿಂದಾಗಿ ಉಂಟಾದ ಸಾವುಗಳನ್ನು ತಡೆಯಬಹುದಿತ್ತು. ಜನರು ಸಾಯಬೇಕೆಂದಿರಲಿಲ್ಲ. ಮೋದಿ ಅವರ ಅಜಾಗರೂಕತೆಯಿಂದ ಮತ್ತು ದುರಹಂಕಾರದಿಂದಾಗಿ ನೂರಾರು ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುತ್ತಾರೆ. ಈ ಸರ್ಕಾರವು ಯಾರ ಮಾತನ್ನೂ ಕೇಳುತ್ತಿಲ್ಲ. ಕೇವಲ ಅಧಿಕಾರ ದಾಹ. ಯಾರ ಬಗ್ಗೆಯೂ ಅನುಕಂಪವಿಲ್ಲ. ಇದು ಅಕ್ಷ್ಯಮ್ಯವಾಗಿದೆ. ಪ್ರಸ್ತುತ ಘಟನೆಗಳು ನನಗೆ ನೋವುಂಟು ಮಾಡಿದೆ ಮತ್ತು ಕೋಪ ಬರಿಸುತ್ತಿದೆ’ ಎಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದಿದ್ದಾರೆ.
‘ಈಗಿನ ಸ್ಥಿತಿಗೆ ಕೊರೊನಾ ಸೋಂಕು ಕಾರಣವಲ್ಲ ಬದಲಾಗಿ ಸರ್ಕಾರದ ಕಾರ್ಯವೈಖರಿಯೇ ಕಾರಣ. ಕಳೆದ ಬಾರಿ ಜಾರಿಗೊಳಿಸಿದ ಲಾಕ್ಡೌನ್, ಆರ್ಥಿಕತೆಯನ್ನು ದುರ್ಬಲಗೊಳಿಸಿದ್ದಲ್ಲದೇ, ಲಕ್ಷಾಂತರ ಜನರನ್ನು ಬಡತನ ಮತ್ತು ಹಸಿವಿನ ಕೂಪಕ್ಕೆ ನೂಕಿತ್ತು. ಆದರೆ ಕೋವಿಡ್ ನಿಯಂತ್ರಣ ಸಾಧ್ಯವಾಗಿರಲಿಲ್ಲ. ಇವರೆಡರ ಪರಿಣಾಮದ ನಡುವೆ ಭಾರತವು ಸಿಲುಕಿದ್ದು, ಅತ್ತ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ, ಇತ್ತ ಆರ್ಥಿಕತೆಯೂ ಕುಸಿದಿದೆ. ನಿರುದ್ಯೋಗ ಸಮಸ್ಯೆ, ಜನಜೀವನವೇ ಅಸ್ತವ್ಯಸ್ಥವಾಗಿದೆ. ಬಿಜೆಪಿ ಬೆಂಬಲಿಗರು ಬುದ್ಧಿಹೀನರಂತೆ ಕಾನೂನು ಹಾಗೂ ಹಕ್ಕುಗಳ ಬಗ್ಗೆ ಅಜ್ಞಾನಿಗಳಾಗಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.