ADVERTISEMENT

ಆಲಿಯಾಗೆ ಕರಣ್‌ ಸಲಹೆ: ‘ಕೈಜಾರುವ ಮೊದಲೇ ಕೈಹಿಡಿ’

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 19:45 IST
Last Updated 7 ಮಾರ್ಚ್ 2019, 19:45 IST
ರಣಬೀರ್‌ ಕಪೂರ್‌ ಆಲಿಯಾ ಭಟ್‌
ರಣಬೀರ್‌ ಕಪೂರ್‌ ಆಲಿಯಾ ಭಟ್‌   

ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬುದು ಬಾಲಿವುಡ್‌ನಲ್ಲಿ ಎಲ್ಲರಿಗೂ ತಿಳಿದಿರುವ ಗುಟ್ಟು. ಅಯಾನ್‌ ಮುಖರ್ಜಿ ಅವರ ‘ಬ್ರಹ್ಮಾಸ್ತ್ರ’ ಶೂಟಿಂಗ್‌ ಸಮಯದಲ್ಲಿ ಇವರಿಬ್ಬರು ಹತ್ತಿರವಾಗಿದ್ದರು. ಈ ಜೋಡಿಯು ಇತ್ತೀಚೆಗೆ ಆಕಾಶ್‌ ಅಂಬಾನಿ ಹಾಗೂ ಶ್ಲೋಕ್‌ ಮೆಹ್ತಾ ಅವರ ವಿವಾಹಪೂರ್ವ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಸ್ವಿಜರ್‌ಲ್ಯಾಂಡ್‌ಗೆ ಹೋಗಿತ್ತು. ಅಲ್ಲಿ ಇವರ ಪ್ರೀತಿಯನ್ನು ಪ್ರಸ್ತಾಪಿಸಿದ ಕರಣ್‌ ಜೊಹರ್‌, ಇಬ್ಬರ ಕೆನ್ನೆ ಕೆಂಪಾಗುವಂತೆ ಮಾಡಿದ್ದರು ಎಂಬುದು ಲೇಟೆಸ್ಟ್‌ ಸುದ್ದಿ.

ಅಲ್ಲಿ ನಡೆದ ಸಮಾರಂಭವೊಂದರಲ್ಲಿ ಕರಣ್‌ ಜೊಹರ್‌ ಆಲಿಯಾಗೆ ಸಲಹೆಯೊಂದನ್ನು ನೀಡುತ್ತಾ, ‘ಎಲ್ಲೆಲ್ಲೂ ಮದುವೆಯ ಸಡಗರ ಕಾಣಿಸುತ್ತಿದೆ. ನೀನೂ ಯಾಕೆ ಮದುವೆ ಆಗಬಾರದು. ರಣಬೀರ್‌ ಗೊತ್ತಲ್ಲ... ಯಾವಾಗ ಕೈಜಾರಿ ಹೋಗುತ್ತಾನೆ ಎಂಬುದೇ ಗೊತ್ತಾಗದು, ಕೈಜಾರುವ ಮೊದಲೇ ಕೈಹಿಡಿ’ ಎಂದರಂತೆ. ಇದರಿಂದ ಇಬ್ಬರೂ ಮುಜುಗರ ಅನುಭವಿಸಿದರಂತೆ.

ಹಾಗೆ ನೋಡಿದರೆ ಕಳೆದ ಕೆಲವು ತಿಂಗಳಿಂದ ಆಲಿಯಾ ಮದುವೆಯ ವಿಚಾರವಾಗಿ ಬಾಲಿವುಡ್‌ನಲ್ಲಿ ವದಂತಿಗಳು ಹರಿದಾಡುತ್ತಲೇ ಇವೆ. ಅದರ ನಡುವೆಯೇ, ‘ಮದುವೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ’ ಎಂದು ಆಲಿಯಾ ಮಾಧ್ಯಮಗಳಿಗೆ ಹೇಳುತ್ತಲೇ ಇದ್ದರು. ಆದರೆ ಇತ್ತೀಚೆಗೆ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, ‘ಪ್ರೀತಿ– ಪ್ರೇಮ ಎಂಬುದು ದೊಡ್ಡ ಸಾಧನೆ ಏನಲ್ಲ. ಆದರೆ ಅದು ನನ್ನ ಜೀವನದ ಬಹುಮುಖ್ಯ ಭಾಗ. ಅದು ತುಂಬ ಸುಂದರವಾದ ಅನುಭವ. ಸಮಯ ಬಂದಾಗ ಅದನ್ನು ಮುಕ್ತವಾಗಿ ಸಂಭ್ರಮಿಸುತ್ತೇನೆ. ಸದ್ಯಕ್ಕೆ ಅದು ನನ್ನ ಮಿದುಳಿನ ಒಂದು ಮೂಲೆಯಲ್ಲಿ ಭದ್ರವಾಗಿರುತ್ತದೆ’ ಎಂದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.