ತೆಲುಗಿನ ಸ್ಟೈಲಿಶ್ ಸ್ಟಾರ್ ಖ್ಯಾತಿಯ ಅಲ್ಲು ಅರ್ಜುನ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ (ಏ.8).
ತೆಲುಗು ಮಾತ್ರವಲ್ಲದೇ ಭಾರತೀಯ ಸಿನಿಮಾ ರಂಗದಲ್ಲೇ ‘ಪುಷ್ಪ‘ ಸಿನಿಮಾದಿಂದ ದೊಡ್ಡ ಬ್ರೇಕ್ ಪಡೆದಿರುವ ಅಲ್ಲು ಅರ್ಜುನ್ ಸದ್ಯ ಪುಷ್ಪ–2 ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
42ನೇ ವರ್ಷದ ಸಂಭ್ರಮದಲ್ಲಿರುವ ಅಲ್ಲು ಅರ್ಜುನ್ ಅವರಿಗೆ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಬಾಲಿವುಡ್ ಸಿನಿಮಾರಂಗದ ಗಣ್ಯರು, ತಂತ್ರಜ್ಞರು, ನಟ, ನಟಿಯರು, ನಿರ್ಮಾಪಕರು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.
ಅಲ್ಲು ಅರ್ಜುನ್ ಅಭಿಮಾನಿಗಳು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಪುಷ್ಪ ಸಿನಿಮಾದ ಪೋಸ್ಟರ್ಗಳನ್ನು ಹಂಚಿಕೊಂಡು ನಲ್ಮೆಯ ನಟನಿಗೆ ಶುಭಾಶಯ ಹೇಳುತ್ತಿದ್ದಾರೆ.
ಅಲ್ಲು ಅರ್ಜುನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ.
ತಿರುಪತಿ ಜೈಲಿನಿಂದ ತಪ್ಪಿಸಿಕೊಂಡಿರುವ ಪುಷ್ಪ. ಪೊಲೀಸರು ಹುಡುಕಾಡುತ್ತಿರುವ ದೃಶ್ಯದಿಂದ ಟೀಸರ್ ಆರಂಭವಾಗುತ್ತದೆ. ಇದೇವೇಳೆ, ಪೊಲೀಸರು ನಡೆಸಿದ ಭಾರಿ ಗುಂಡಿನ ದಾಳಿಯಲ್ಲಿ ಪುಷ್ಪಾ ತೀವ್ರ ಗಾಯಗೊಂಡಿದ್ದಾನೆ. ಬದುಕಿರುವ ಸಾಧ್ಯತೆ ಇಲ್ಲ ಎಂಬ ವದಂತಿ ಹಬ್ಬುತ್ತಿದ್ದಂತೆ ಗಲಭೆಗಳು ಆರಂಭವಾಗುತ್ತವೆ. ಈ ನಡುವೆ ಜನ ಪುಷ್ಪ ಮಾಡಿದ ಸಹಾಯವನ್ನು ನೆನೆಯುತ್ತಾ ಪೊಲೀಸರೇ ಅವನನ್ನು ಕೊಂದಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇತ್ತ, ಸಿಸಿಟಿವಿವೊಂದರಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಪುಷ್ಪಾನನ್ನು ಕಂಡು ಹುಲಿ ಎರಡು ಹೆಜ್ಜೆ ಹಿಂದಕ್ಕಿಟ್ಟಿರುವ ದೃಶ್ಯವನ್ನು ಸುದ್ದಿವಾಹಿನಿಯೊಂದು ಪ್ರಸಾರ ಮಾಡುತ್ತೆ. ಈ ಸಂದರ್ಭ ಪುಷ್ಪಾ ಬದುಕಿರುವ ಮಾಹಿತಿ ತಿಳಿದ ಜನರು ನಿಟ್ಟುಸಿರುಬಿಡುತ್ತಾರೆ. ಶಾಲನ್ನು ಸುತ್ತಿಕೊಂಡಿರುವ ಪುಷ್ಪ, ಕುತ್ತಿಗೆಯನ್ನು ಪಕ್ಕಕ್ಕೆ ತಿರುಗಿಸಿ ಮಾಸ್ ಡೈಲಾಗ್ ಹೊಡೆಯುತ್ತಾನೆ. ಅಲ್ಲಿಗೆ ಟೀಸರ್ ಕೊನೆಗೊಳುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.