
ಅಮೃತಾಂಜನ್
ಕಿರುಚಿತ್ರಗಳ ಮೂಲಕವೇ ಖ್ಯಾತಿ ಪಡೆದಿರುವ ಪಾಯಲ್ ಚೆಂಗಪ್ಪ, ಕಾರ್ತಿಕ್ ರೆಡ್ಡಿ, ಗೌರವ್ ಶೆಟ್ಟಿ, ಸ್ಫೂರ್ತಿ ರಮಿತ, ಶ್ರೀ ಭವ್ಯ ಕೆವಿ, ಗಂಗಾಧರ್ ನಾಗತಿಹಳ್ಳಿ ಶೀಘ್ರದಲ್ಲೇ ಸಿನಿಮಾವೊಂದರ ಮೂಲಕ ಪ್ರೇಕ್ಷಕರ ಎದುರಿಗೆ ಬರಲಿದ್ದಾರೆ.
‘ಅಮೃತಾಂಜನ್’ ಎಂಬ ಕಿರುಚಿತ್ರವು ಇದೀಗ ಸಿನಿಮಾವಾಗಲಿದ್ದು, ಜ್ಯೋತಿ ರಾವ್ ಮೋಹಿತ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸಿನಿಮಾ ಕುರಿತು ಮಾತನಾಡಿದ ಅವರು, ‘ಅಮೃತಾಂಜನ್ ಕಿರುಚಿತ್ರಕ್ಕೂ ಸಿನಿಮಾಗೂ ಬಹಳ ವ್ಯತ್ಯಾಸವಿದೆ. ನಾನು ಇದಕ್ಕೂ ಮೊದಲು ‘ಸೋಡಾಬುಡ್ಡಿ’ ಎಂಬ ಸಿನಿಮಾ ಮಾಡಿದ್ದೆ. ಅದು ಗೆಲ್ಲಲಿಲ್ಲ. ಆಮೇಲೆ ‘ಅಮೃತಾಂಜನ್’ ಕಿರುಚಿತ್ರ ಮಾಡಿದೆ. ಅದು ಗೆದ್ದಿತು. ಬಳಿಕ ಇದನ್ನೇ ಸಿನಿಮಾ ರೂಪದಲ್ಲಿ ದೊಡ್ಡ ತೆರೆಗೆ ಮಾಡಲು ನಿರ್ಧರಿಸಿದೆವು. ಸಿನಿಮಾಗೆ ಏನೇನು ಬದಲಾವಣೆಗಳು ಬೇಕೋ ಅದನ್ನು ಮಾಡಿದ್ದೇವೆ. ಇದಕ್ಕಾಗಿ ಒಂದು ಗಟ್ಟಿಯಾದ ಕಥೆ ಸಿದ್ಧಪಡಿಸಿ, ಮೂರು ತಿಂಗಳು ಪೂರ್ವತಯಾರಿ ಮಾಡಿಕೊಂಡೇ ಚಿತ್ರೀಕರಣಕ್ಕೆ ಇಳಿದಿದ್ದೆವು. ಪ್ರತೀ ದೃಶ್ಯದಲ್ಲೂ ಹಾಸ್ಯಕ್ಕೆ ಒತ್ತು ನೀಡಿದ್ದೇವೆ. ‘ನಾನು ಕುಡಿಯೋದು ಬಿಟ್ಟರೆ ನೀನು ಮೇಕಪ್ ಹಾಕೋದು ಬಿಡ್ತೀಯಾ’ ಎಂಬ ಡೈಲಾಗ್ ಇಲ್ಲೂ ಮುಂದುವರಿಸಿದ್ದು, ಉಳಿದಂತೆ ಕಥೆ ಎಳೆ ಹೊಸದಾಗಿದೆ’ ಎಂದರು.
‘ಕಿರುಚಿತ್ರದ ರೀತಿ ಸಿನಿಮಾ ಮಾಡಿದರೆ ಯಾರೂ ಚಿತ್ರಮಂದಿರಕ್ಕೆ ಬರುವುದಿಲ್ಲ. ಹೀಗಾಗಿ ಸವಾಲು ಅಧಿಕವಾಗಿತ್ತು. ಸಿನಿಮಾಗೆ ಈಗಾಗಲೇ ಸೆನ್ಸಾರ್ ಆಗಿದೆ. ಫ್ಯಾಮಿಲಿ ಆಡಿಯನ್ಸ್ ಮತ್ತು ಯುವಜನತೆಗೆ ಇದೊಂದು ಮನರಂಜನೆಯ ಪ್ಯಾಕೇಜ್. ಭಾವನೆಗಳೂ ಇಲ್ಲಿ ಜಾಗವಿದೆ. ಬೆಂಗಳೂರು, ಮಂಗಳೂರು, ಉಡುಪಿ ಭಾಗದಲ್ಲಿ ಶೂಟ್ ಮಾಡಲಾಗಿದೆ’ ಎಂದರು ಜ್ಯೋತಿ ರಾವ್ ಮೋಹಿತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.