ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರವಿಕ್ರಂ ರವಿಚಂದ್ರನ್ ನಟನೆಯ ಮತ್ತೊಂದು ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ.ವಿಭಿನ್ನ ಮತ್ತು ಮಾಸ್ಕಥಾಹಂದರದ ಈ ಚಿತ್ರಕ್ಕೆ ಮನು ನಾಗ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಸೀದಾಸಾದಾ ಮತ್ತು ರಗಡ್ ಲುಕ್ನ ಪಾತ್ರದಲ್ಲಿ ವಿಕ್ರಂ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸೆಂಟಿಮೆಂಟ್ ಸನ್ನಿವೇಶಗಳೂ ಇದ್ದು, ತಾಯಿ ಹಾಗೂ ಮಗನ ನಡುವಿನ ಭಾಂದವ್ಯದ ದೃಶ್ಯಗಳು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿರಲಿವೆ ಎನ್ನುವುದು ನಿರ್ದೇಶಕ ಮನು ನಾಗ್ ಅನಿಸಿಕೆ.
ಸ್ಯಾಂಡಲ್ವುಡ್ ಮತ್ತು ಮಾಲಿವುಡ್ನ ಖ್ಯಾತ ನಿರ್ದೇಶಕರ ಬಳಿ ಪಳಗಿರುವ ಮನು ನಾಗ್,ಬಹುಭಾಷ ನಟಿ ಪ್ರಿಯಾಮಣಿ ಅವರ ಅಭಿನಯದಲ್ಲಿ ‘ವೈಟ್’ ಎಂಬ ಕಿರುಚಿತ್ರ ನಿರ್ದೇಶಿಸಿದ್ದರು. ಚಿತ್ರರಂಗದ ಇತಿಹಾಸಾದಲ್ಲೇ ಮೊದಲ ಬಾರಿಗೆ ಎನ್ನುವಂತೆ ಕಿರುಚಿತ್ರವೊಂದಕ್ಕೆ ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಧ್ವನಿ ನೀಡಿದ್ದರು.
ಕಥೆ, ಚಿತ್ರಕಥೆಯೂಮನು ನಾಗ್ ಅವರದೇ. ಸದ್ಯ ಚಿತ್ರೀಕರಣ ಪೂರ್ವದ ಕೆಲಸಗಳು ಬಿರುಸಿನಿಂದ ಸಾಗಿವೆ.ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಅಂತಿಮವಾಗಲಿದೆಯಂತೆ. ಈ ಚಿತ್ರಕ್ಕೆ ಚೆನ್ನೈ ಮೂಲದ ವ್ಯಕ್ತಿಯೊಬ್ಬರು ಬಂಡವಾಳ ಹೂಡಲಿದ್ದಾರಂತೆ.
ವಿಕ್ರಂ ರವಿಚಂದ್ರನ್ ಸದ್ಯ ಸಹನಾಮೂರ್ತಿ ನಿರ್ದೇಶನದ ‘ತ್ರಿವಿಕ್ರಮ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ವಿಕ್ರಂಗೆ ಇದು ಚೊಚ್ಚಲ ಸಿನಿಮಾ. ವಿಕ್ರಮ್ಗೆ ನಾಯಕಿಯಾಗಿ ಉತ್ತರ ಭಾರತದ ರೂಪದರ್ಶಿ ಆಕಾಂಕ್ಷಾ ಶರ್ಮಾ ನಟಿಸುತ್ತಿದ್ದಾರೆ. ರೊಮ್ಯಾಂಟಿಕ್ ಲವ್ ಸ್ಟೋರಿಯ ಈ ಚಿತ್ರದ ಆಡಿಯೊ ಹಕ್ಕುಗಳು ಇತ್ತೀಚೆಗಷ್ಟೇ ದಾಖಲೆಯ ಮೊತ್ತಕ್ಕೆ ಮಾರಾಟವಾಗಿವೆ. ವಿಕ್ರಂ ನಟನೆಯ ಚೊಚ್ಚಲ ಸಿನಿಮಾ ಬಿಡುಗಡೆಯಾಗುವ ಮೊದಲೇ ಅವರಿಗೆ ಮತ್ತೊಂದು ಸಿನಿಮಾ ಅರಸಿ ಬಂದಿದ್ದು, ವಿಕಿ ಸ್ಯಾಂಡಲ್ವುಡ್ನಲ್ಲಿ ಬೇಡಿಕೆಯ ನಟನಾಗುವ ನಿರೀಕ್ಷೆ ಮೂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.