ADVERTISEMENT

ಹೊರಗಿನ ಪ್ರತಿಭೆ ಎದುರು ಬಾಲಿವುಡ್‌‌ ಪರಿವಾರವಾದ ಸೋತಿದೆ

ಮಾತಿನ ಛಾಟಿ ಬೀಸಿದ ನಿರ್ದೇಶಕ ಅನುಭವ್ ಸಿನ್ಹಾ ‌

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 5:13 IST
Last Updated 22 ಜೂನ್ 2020, 5:13 IST
 ನಿರ್ದೇಶಕ ಅನುಭವ್ ಸಿನ್ಹಾ
ನಿರ್ದೇಶಕ ಅನುಭವ್ ಸಿನ್ಹಾ    

ನಟ ಸುಶಾಂತ್‌ ಸಿಂಗ್‌ ರಜಪೂತ್ ಆತ್ಮಹತ್ಯೆ ಬೆನ್ನಲ್ಲೇ ಬಾಲಿವುಡ್‌ ಅಂಗಳದಲ್ಲಿ ಭುಗಿಲೆದ್ದಿರುವ ಸ್ವಜನಪಕ್ಷಪಾತ, ಪರಿವಾರವಾದ ಮತ್ತು ಒಳ ರಾಜಕೀಯ ವಿರುದ್ಧದ ಕೂಗಿಗೆ ಈಗ ನಿರ್ದೇಶಕ ಅನುಭವ್ ಸಿನ್ಹಾ ಹೊಸದಾಗಿ ಧ್ವನಿಗೂಡಿಸಿದ್ದಾರೆ.

‘ಇಂಡಸ್ಟ್ರಿಗೆ ಹೊರಗಿನಿಂದ ಪ್ರತಿಭೆಗಳ ಯಶಸ್ಸಿನಲ್ಲಿ ಸ್ವಜನಪಕ್ಷಪಾತ ಮತ್ತು ಪರಿವಾರವಾದ ಕೊಚ್ಚಿಕೊಂಡ ಹೋದ ಉದಾಹರಣೆಗಳು ಇವೆ’ ಎಂದು ಸಿನ್ಹಾ ಚರ್ಚೆಗೆ ಹೊಸ ಆಯಾಮ ಕೊಟ್ಟಿದ್ದಾರೆ.

ತುಮ್ ಬಿನ್, ದಸ್‌, ರಾ ಒನ್‌, ಮುಲ್ಕ್‌, ಆರ್ಟಿಕಲ್‌ 15, ತಪ್ಪಡ್‌ ಮುಂತಾದ ಯಶಸ್ವಿ ಚಿತ್ರಗಳ ಮೂಲಕ ಅಲಹಾಬಾದ್‌ನ ಸಿನ್ಹಾ ಈಗಾಗಲೇ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹೊರಗಿನ ಪ್ರತಿಭೆಗಳನ್ನು ಹೊಸಕಿ ಹಾಕುವಬಾಲಿವುಡ್ ಒಳ ರಾಜಕೀಯದ ಬಗ್ಗೆ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

‘ಜಾತಿ, ಮತ, ಧರ್ಮ ಮತ್ತು ಪಂಥವನ್ನು ಮೀರಿದ ಬಾಲಿವುಡ್ ಮೂವಿ ಮಾಫಿಯಾದ‌ ಈ ಒಳ ರಾಜಕೀಯವನ್ನು ಯಾರ ಬೆಂಬಲವೂ ಇಲ್ಲದ ಮತ್ತು ದೊಡ್ಡ ಕುಟುಂಬ ಹಿನ್ನೆಲೆ ಇಲ್ಲದ ಪ್ರತಿಭೆಗಳು ಮೆಟ್ಟಿನಿಂತ ನಿದರ್ಶನಗಳಿವೆ. ಹೊರಗಿನವರ ಯಶಸ್ಸಿನ ಅಲೆಯಲ್ಲಿ ‘ನೆಪೋಟಿಸಂ‌’ ಭೂತ ಹೇಳ ಹೆಸರಿಲ್ಲದಂತೆ ಕೊಚ್ಚಿಕೊಂಡು ಹೋಗಿದೆ’ ಎಂದು ಛಾಟಿ ಬೀಸಿದ್ದಾರೆ.

ನಟಿ ಕಂಗನಾ ರನೋಟ್‌ ಕೂಡ ಬಾಲಿವುಡ್‌ನಲ್ಲಿರುವ ‘ಮೂವಿ ಮಾಫಿಯಾ’ ವಿರುದ್ಧ ಬಹಿರಂಗ ಸಮರ ಸಾರಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ವಿಡಿಯೊ ಬಿಡುಗಡೆ ಮಾಡುತ್ತಿದ್ದಾರೆ. ನಿರ್ದೇಶಕ ಕರಣ್‌ ಜೋಹರ್‌, ನಟ ಸಲ್ಮಾನ್ ಖಾನ್‌ ಸೇರಿದಂತೆ ಬಾಲಿವುಡ್‌ನ ಅತಿರಥ, ಮಹಾರಥರ ಬೆವರು ಇಳಿಸುತ್ತಿದ್ದಾರೆ.‌

‘ಸಿನಿಮಾ ಕುಟುಂಬದ ಹಿನ್ನೆಲೆ, ಗಾಡ್‌ಫಾದರ್‌ಗಳಲ್ಲದೆ ಹಿಂದಿ ಚಿತ್ರರಂಗದಲ್ಲಿ ಬೆಳೆಯಲಾಗದು ಎಂಬ ಶೋಚನೀಯ ಪರಿಸ್ಥಿತಿ ಬಾಲಿವುಡ್‌ನಲ್ಲಿ ಮನೆ ಮಾಡಿದೆ. ಇದಕ್ಕೆ ಅನೇಕ ಪ್ರತಿಭೆಗಳು ಬಲಿಯಾಗಿವೆ. ಸುಶಾಂತ್‌ ಸಿಂಗ್‌ ಈ ಸಾಲಿಗೆ ಹೊಸ ಸೇರ್ಪಡೆ’ ಎಂದು ಕಂಗನಾ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.